ಬೆಂಗಳೂರು: ಇನ್ನೇನು ಮಳೆಗಾಲ ಆರಂಭವಾಗುತ್ತದೆ. ಕರ್ನಾಟಕ ಸೇರಿ ದೇಶದ ಹಲವೆಡೆ ಭಾರಿ ಮಳೆ, ಚಂಡಮಾರುತ, ಪ್ರವಾಹ, ಭೂಕುಸಿತ ಸೇರಿ ಹಲವು ಅವಘಡಗಳು ಸಂಭವಿಸುತ್ತವೆ. ಹೀಗೆ ಹವಾಮಾನ ವೈಪರೀತ್ಯದ ಕುರಿತು ಜನರಿಗೆ ಅಲರ್ಟ್ ನೀಡಬೇಕು ಎಂದೇ ಕೇಂದ್ರ ಸರ್ಕಾರವು ಸಚೇತ್ (SACHET App) ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಹವಾಮಾನದ ಕುರಿತು ಜನರಿಗೆ ರಿಯಲ್ ಟೈಮ್ ಮಾಹಿತಿ ನೀಡುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮನ್ ಕೀ ಬಾತ್ ನಲ್ಲಿ ಈ ಆ್ಯಪ್ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿಯೊಬ್ಬರೂ ಈ ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳುವ ಮೂಲಕ ಹವಾಮಾನ ವೈಪರೀತ್ಯ, ಅವಘಡಗಳ ಕುರಿತು ಮಾಹಿತಿ ಪಡೆಯಬೇಕು ಎಂದಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್ ಡಿ ಎಂ ಎ) ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಅಷ್ಟಕ್ಕೂ ಆ್ಯಪ್ ನಲ್ಲಿ ಏನೆಲ್ಲ ಮಾಹಿತಿ ಇದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಆ್ಯಪ್ ವಿಶೇಷತತೆಗಳು ಏನು?
- ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡವರ ಲೊಕೇಷನ್ ಆಧರಿಸಿ, ಆ ಪ್ರದೇಶದ ಹವಾಮಾನ ವೈಪರೀತ್ಯದ ಕುರಿತು ಮಾಹಿತಿ ನೀಡುತ್ತದೆ.
- ಬೇರೆ ರಾಜ್ಯಗಳು ಹಾಗೂ ಜಿಲ್ಲೆಗಳ ಹವಾಮಾನದ ಕುರಿತು ಮಾಹಿತಿ ಲಭ್ಯವಾಗುತ್ತದೆ.
- ಹಿಂದಿ ಸೇರಿ ದೇಶದ 12 ಭಾಷೆಗಳಲ್ಲಿ ಮಾಹಿತಿ ನೀಡುತ್ತದೆ.
- ವೈಪರೀತ್ಯಗಳ ಜತೆಗೆ ಹವಾಮಾನ ವರದಿಯನ್ನೂ ನೀಡುತ್ತದೆ.
- ಪ್ರವಾಹ, ಚಂಡಮಾರುತದ ವೇಳೆ ಜನ ಏನು ಮಾಡಬೇಕು, ಏನು ಮಾಡಬಾರದು ಎಂಬ ಮಾಹಿತಿಯನ್ನೂ ಒದಗಿಸುತ್ತದೆ.
- ಮೊಬೈಲ್ ಗಳಿಗೆ ಎಸ್ಎಂಎಸ್ ಕೂಡ ಕಳುಹಿಸುತ್ತದೆ.