ಬೆಂಗಳೂರು: ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಜಾತಿ ಗಣತಿ ಮಾಡುತ್ತಿದೆ. ದೇಶದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ನಿರ್ಧಾರ ಮಾಡಲು ಮತ್ತು ಭವಿಷ್ಯದ ಅನೇಕ ನಿರ್ಧಾರಕ್ಕೆ ಇದು ಸಹಾಯಕ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಜಾತಿ ಗಣತಿ, ಜನಗಣತಿ ಕುರಿತ ಕೇಂದ್ರದ ನಿರ್ಧಾರವು ಇಡೀ ದೇಶದ ಜನರಿಗೆ ಖುಷಿ ತಂದಿದೆ. ಇದನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.
ವಿವಿಧ ಜಾತಿಗಳ ಪರಿಸ್ಥಿತಿ ತಿಳಿದುಕೊಳ್ಳಲು ಇದು ಸಹಾಯಕ. ಈ ನಿರ್ಧಾರವನ್ನು ಬಿಜೆಪಿ ಕರ್ನಾಟಕ ಘಟಕ ಸ್ವಾಗತಿಸುತ್ತದೆ ಎಂದು ಹೇಳಿದರು.
ಇವತ್ತು ಕೇಂದ್ರ ಸರ್ಕಾರವು ಜಾತಿಗಣತಿ ಮಾಡಲು ನಿರ್ಧರಿಸಿದ್ದು ಟಿವಿಗಳಲ್ಲಿ ಬರುತ್ತಿದೆ. ಇದು ಕೇಂದ್ರದ ಸಂವಿಧಾನದತ್ತ ಅಧಿಕಾರ. ಹಿಂದೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವು ಪಕ್ಷಗಳು ಜಾತಿ ಸಮೀಕ್ಷೆ ನಡೆಸಿದ್ದವು ಎಂದು ಆಕ್ಷೇಪಿಸಿದರು.
ಕರ್ನಾಟಕದಲ್ಲಿ ಜಾತಿ ಗಣತಿ ನಡೆದಿರಲಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೇ ಮಾಡಿದ್ದಾಗಿ ತಿಳಿಸಿದ್ದರು. ಅದೂ ಕೂಡ ಸರಿಯಾಗಿ ಮಾಡಿರಲಿಲ್ಲ. ಅನೇಕ ಸಮುದಾಯಗಳು ವಿರೋಧ ಮಾಡಿದ್ದವು ಎಂದು ಗಮನ ಸೆಳೆದರು. ಇನ್ನೂ ಹಲವು ಸಮುದಾಯಗಳು ತಮ್ಮ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದ್ದರೂ ಅದನ್ನು ಸರಿಯಾಗಿ ತೋರಿಸಿಲ್ಲ; ಕಡಿಮೆ ಸಂಖ್ಯೆ ತೋರಿಸಿದ್ದಾಗಿ ಹೇಳಿವೆ ಎಂದಿದ್ದಾರೆ.


















