ಬೆಂಗಳೂರು: ಬಿಬಿಎಂಪಿ ಅಯುಕ್ತರ ವರ್ಗಾವಣೆಗೆ ಸರ್ಕಾರ ತಯಾರಿ ನಡೆಸಿದ್ದು, ಹಲವು ಅಧಿಕಾರಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಹೊಸ ಐಎಎಸ್ ಅಧಿಕಾರಿ ನೇಮಕಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಯಾವ ಕ್ಷಣದಲ್ಲಾದರೂ ಆದೇಶ ಹೊರಡಬಹುದು ಎನ್ನಲಾಗುತ್ತಿದೆ. ಈಗಿರುವ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ನಗರಾಭಿವೃದ್ದಿ ಇಲಾಖೆಗೆ ತುಷಾರ್ ಗಿರಿನಾಥ್ ವರ್ಗಾವಣೆಯಾಗಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಮಾಶಂಕರ್ ಅವರು ಇದೇ ತಿಂಗಳು ನಿವೃತ್ತಿ ಹೊಂದಲಿದ್ದು, ಆ ಸ್ಥಾನಕ್ಕೆ ತುಷಾರ್ ಗಿರಿನಾಥ್ ನಿಯೋಜನೆಯಾಗುವ ಸಾಧ್ಯತೆ ಇದೆ. ಅಲ್ಲದೇ, ಬಿಬಿಎಂಪಿ ಆಡಳಿತಗಾರ ಹುದ್ದೆಯಲ್ಲೂ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಇನ್ನೊಂದೆಡೆ ತುಷಾರ್ ಸ್ಥಾನಕ್ಕೂ ಭಾರೀ ಪೈಪೋಟಿ ಏರ್ಪಟ್ಟಿದೆ. ಹಿರಿಯ ಐಎಎಸ್ ಗಳಾದ ಮಣಿವಣ್ಣನ್, ಮಹೇಶ್ವರರಾವ್, ಪಂಕಜ್ ಕುಮಾರ್ ಪಾಂಡೆ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗುತ್ತಿದೆ.
ಮಹೇಶ್ವರರಾವ್ ಬಿಎಂಆರ್ ಸಿಎಲ್ ಎಂಡಿ ಆಗಿದ್ದಾರೆ. ಮಣಿವಣ್ಣನ್ ಅವರು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪಂಕಜ್ ಕುಮಾರ್ ಪಾಂಡೆ ಅವರು ಇಂಧನ ಇಲಾಖೆ ಕಾರ್ಯದರ್ಶಿಯಾಗಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ 3 ವರ್ಷಗಳನ್ನು ಕಳೆದಿದ್ದಾರೆ. ಹೀಗಾಗಿ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರಿಂದ ಸರ್ಕಾರ ಕೂಡ ವರ್ಗಾವಣೆ ಮುಂದಾಗಿದೆ ಎನ್ನಲಾಗಿದೆ.