ಮುಂಗಾರು ಮಳೆಗೂ ಮುನ್ನ ರಾಜ್ಯ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿದ್ದು, ಅವಾಂತರ ಸೃಷ್ಟಿಸುತ್ತಿದೆ. ಈ ಮಧ್ಯೆ ಹವಾಮಾನ ಇಲಾಖೆ ಮಾನ್ಸೂನ್ ಮಳೆಯ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ವಾಡಿಕೆಗಿಂತ ಶೇಕಡಾ 105ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ. 2025ರ ನೈಋತ್ಯ ಮುಂಗಾರು (ಜೂನ್–ಸೆಪ್ಟೆಂಬರ್) ದೀರ್ಘ ಅವಧಿಯಲ್ಲಿ ವರ್ಷಧಾರೆ ತರಲಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಮತ್ತು ಉತ್ತರ ಕರಾವಳಿಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಾಡಿಕೆಗಳಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕರಾವಳಿಯ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ತುಮಕೂರು, ಕೋಲಾರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲೂ ನಿರೀಕ್ಷೆಗಿಂತ ಅಧಿಕ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಹೇಳಿದೆ. ಕೆಲವೆಡೆ ಸಾಮಾನ್ಯ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಮಾಹಿತಿ ನೀಡಿದೆ.
ದೇಶಾದ್ಯಂತ ಉತ್ತಮ ಮಳೆ
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಈ ವರ್ಷದ ನೈರುತ್ಯ ಮಾರುತ, ದೇಶಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಸಲಿದೆ. ಒಟ್ಟಾರೆಯಾಗಿ 105% ದೀರ್ಘಾವಧಿಯ ಸರಾಸರಿ (LPA) ಮಳೆಯಾಗುವ ನಿರೀಕ್ಷೆಯಿದೆ. LPA ಎಂದರೆ 1971-2020ರ 50 ವರ್ಷಗಳ ಅವಧಿಯ ಸರಾಸರಿ 87 ಸೆಂ.ಮೀ. ಮಳೆಯಾಗಿದೆ.
ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದರೂ, ಲಡಾಖ್, ಈಶಾನ್ಯ ಭಾರತ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಂಭವವಿದೆ.
ಎಲ್ ನಿನೊ ಮತ್ತು ಭಾರತೀಯ ಸಾಗರ ಡೈಪೋಲ್ (IOD) ಎರಡೂ ತಟಸ್ಥ ಸ್ಥಿತಿಯಲ್ಲಿರುವುದರಿಂದ, 2025ರ ಮಾನ್ಸೂನ್ ಋತುವಿಗೆ ಅನುಕೂಲಕರ ವಾತಾವರಣವಿದೆ.
ಉತ್ತಮ ಕೃಷಿ ಉತ್ಪಾದನೆ
ಈ ವರ್ಷದ ಉತ್ತಮ ಮಾನ್ಸೂನ್ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದು, ವಿಶೇಷವಾಗಿ ಭತ್ತ, ಕಬ್ಬು, ಎಣ್ಣೆ ಕಾಳುಗಳು ಮತ್ತು ದ್ವಿದಳ ಧಾನ್ಯಗಳಂತಹ ಬೆಳೆಗಳು ಹೆಚ್ಚು ಉತ್ಪಾದನೆಯಾಗಲಿದೆ. 2024ರಲ್ಲಿ 108% ಮಳೆ ಯಾಗಿತ್ತು. ಇದು ಕೃಷಿಗೆ ಗಣನೀಯ ಉತ್ತೇಜನ ನೀಡಿತ್ತು, ಮತ್ತು 2025ರ ಮುನ್ಸೂಚನೆಯು ಈ ಧನಾತ್ಮಕ ಪ್ರವೃತ್ತಿಯನ್ನು ಮುಂದುವರಿಸುವ ಸಾಧ್ಯತೆಯಿದೆ. ಅದೇ ರೀತಿ ಜಲಾಶಯಗಳು ನೀರಾವರಿಗೆ ಮತ್ತು ವಿದ್ಯುತ್ ಉತ್ಪಾದನೆಗೆ ಅಗತ್ಯವಾಗಿದೆ.



















