ಹಾಸನ: ಮೈಕ್ರೋಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ವಿಪರೀತವಾದ ಹಿನ್ನೆಲೆಯಲ್ಲಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೂ ಕಿರುಕುಳ ಮಾತ್ರ ನಿಲ್ಲುತ್ತಿಲ್ಲ ಎನ್ನುವುದಕ್ಕೆ ಜ್ವಲಂತ ಉದಾಹರಣೆಯೊಂದು ಬೆಳಕಿಗೆ ಬಂದಿದೆ.
ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಹಾಸನ (Hassan) ಆಲೂರು (Alur) ತಾಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ. ಕೆಂಚಮ್ಮ(50) ನೇಣಿಗೆ ಶರಣಾದ ಮಹಿಳೆ. ಬಿಎಸ್ಎಸ್, ಇಐಎಫ್ ಹೆಸರಿನ ಫೈನಾನ್ಸ್ ಕಂಪನಿಯಿಂದ ಕೆಂಚಮ್ಮ 2 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು ಕಂತು ತುಂಬುತ್ತಿದ್ದರು. ಆದರೆ, ಈ ತಿಂಗಳು ಕಂತು ತಂಬಲು ಆಗಿರಲಿಲ್ಲ. ಆದರೆ, ಇಂದು ಮನೆಗೆ ಹಣ ವಸೂಲಿಗೆ ಬಂದಿದ್ದ ಸಿಬ್ಬಂದಿ, ಇಂದೇ ಕಟ್ಟಬೇಕೆಂದು ಮನೆಯ ಬಳಿಯೇ ಬಂದು ಕುಳಿತಿದ್ದಾರೆ.
ಇದರಿಂದ ಮನನೊಂದು ಮನೆಯಲ್ಲಿಯೇ ಕೆಂಚಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಚಮ್ಮ ಸಾವಿನ ಸುದ್ದಿ ತಿಳಿದು ಮೈಕ್ರೋಫೈನಾನ್ಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.