ಫೆ.23 ರಂದು ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ(IND vs PAK) ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಈ ಪ್ರಮುಖ ಪಂದ್ಯ ಆಯೋಜನೆಗೊಂಡಿದೆ. ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕೆ ಸಾಕ್ಷಿಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹಲವರು ಫಲಿತಾಂಶಗಳ ಲೆಕ್ಕಾಚಾರ ಹಾಕುತ್ತಿದ್ದು, ಇನ್ನೂ ಹಲವಾರು ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಏತನ್ಮಧ್ಯೆ, ಮಹಾಕುಂಭದಲ್ಲಿ ಕಂಡು ಬಂದ ಮಾಜಿ ಏರೋಸ್ಪೇಸ್ ಇಂಜಿನಿಯರ್ ‘ಐಐಟಿ ಬಾಬಾ'(IIT Baba) ಅಭಯ್ ಸಿಂಗ್ ನೀಡಿರುವ ಭವಿಷ್ಯ ವೈರಲ್ ಆಗಿದೆ. ಜತೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಸ್ಥಳೀಯ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ ಐಐಟಿ ಬಾಬಾ,’ಭಾರತ ತಂಡದ ಆಟಗಾರರು ಎಷ್ಟೇ ಪ್ರಯತ್ನಿಸಿದರೂ ಈ ಪಾಕ್ ವಿರುದ್ಧ ಗೆಲ್ಲುವುದಿಲ್ಲ. ನಾನು ಭವಿಷ್ಯ ನುಡಿದ ಮೇಲೆ ಅದು ನಿಜ. ಪಾಕ್ ಗೆದ್ದೇ ಗೆಲ್ಲುತ್ತದೆ. ಈ ಕುರಿತ ಯಾವ ಸವಾಲಿಗೂ ನಾನು ಸಿದ್ಧ’ ಎಂದು ಹೇಳಿದ್ದಾರೆ. 2024ರ ಟಿ20 ವಿಶ್ವಕಪ್ ವೇಳೆ ಭಾರತ ತಂಡ ಕಪ್ ಗೆಲ್ಲಲಿದೆ ಎಂದು ಇದೇ ಬಾಬಾ ಭವಿಷ್ಯ ನುಡಿದಿದ್ದರು. ಅಂತೆಯೇ ಭಾರತ ದಕ್ಷಿಣ ಆಫ್ರಿಕಾವನ್ನು ಮಣಿಸಿ ಕಪ್ ಗೆದ್ದಿತ್ತು.
ವಿರೋಧ
ಐಐಟಿ ಬಾಬಾನ ಭವಿಷ್ಯ ಕೇಳಿದ ಬಳಿಕ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ. ಒಂದೊಮ್ಮೆ ನಿಮ್ಮ ಭವಿಷ್ಯ ಸುಳ್ಳಾದರೆ ನೀವೇನು ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ನಿಮ್ಮ ಭವಿಷ್ಯ ಸುಳ್ಳಾದರೆ ಸನ್ಯಾಸ ತೊರೆದು ಮತ್ತೆ ಏರೋಸ್ಪೇಸ್ನಲ್ಲಿ ಕೆಲಸ ಮುಂದುವರಿಸಿ ಸಲಹೆ ನೀಡಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅಜೇಯ ದಾಖಲೆ ಹೊಂದಿದ್ದರೂ, ಟಿ20 ವಿಶ್ವಕಪ್ನಲ್ಲಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕ್ ನಡುವೆ 2-3 ಗೆಲುವಿನ ಅನುಪಾತವಿದೆ. ಅದರಲ್ಲೂ 2017ರ ಫೈನಲ್ ಸೋಲು ಭಾರತಕ್ಕೆ ದೊಡ್ಡ ಮುಖಭಂಗ.
ವಿಜಯದ ಒತ್ತಡದಲ್ಲಿ ಪಾಕಿಸ್ತಾನ
ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಗೆಲ್ಲಲ್ಲೇ ಬೇಕಾದ ಒತ್ತಡವಿದೆ. ಕಿವೀಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಫಖರ್ ಜಮಾನ್ ಟೂರ್ನಿಯಿಂದ ಹೊರಬಿದ್ದಿರುವುದು ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರು ಭಾರತ ವಿರುದ್ಧ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದರು.