ಬೆಂಗಳೂರು: ಬಿಜೆಪಿಯ ಬೀದಿ ಜಗಳಕ್ಕೆ ಅಂತ್ಯ ಹಾಡಲು ಹೈಕಮಾಂಡ್ ಮುಂದಾಗಿದ್ದು, ಫೆಬ್ರವರಿ ಕೊನೆಯ ವಾರದಲ್ಲಿ ಡೆಡ್ ಲೈನ್ ಬೀಳಬಹುದು ಎನ್ನಲಾಗುತ್ತಿದೆ.
ಫೆಬ್ರವರಿ 22 ರಂದು ರಾಜ್ಯಕ್ಕೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಆಗಮಿಸುತ್ತಿದ್ದಾರೆ. ಹೀಗಾಗಿ ಕಾಳಗಕ್ಕೆ ಉಭಯ ಬಣಗಳು ಸಿದ್ಧವಾಗಿವೆ. ಅಸಮಾಧಾನ ಹೊರ ಹಾಕಲು ಬಿ.ವೈ. ವಿಜಯೇಂದ್ರ ಹಾಗೂ ರೆಬಲ್ಸ್, ತಟಸ್ಥ ಬಣಗಳು ಸಿದ್ಧವಾಗಿವೆ. ಇದಕ್ಕಾಗಿ ಫೆ. 20ರಂದು ಬೆಂಗಳೂರಿನಲ್ಲಿ ರೆಬೆಲ್ಸ್ ಟೀಮ್ ಸಭೆ ಕರೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗೆ ಇಳಿಸಿ ಆ ಸ್ಥಾನಕ್ಕೆ ವಿ. ಸೋಮಣ್ಣ ಅವರನ್ನು ನೇಮಕ ಮಾಡುವಂತೆ ರೆಬೆಲ್ಸ್ ಟೀಮ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಬಿಎಸ್ ವೈ ಸಮಾಧಾನ ಮಾಡುವುದಕ್ಕಾಗಿ ಬಿ.ವೈ. ರಾಘವೇಂದ್ರಗೆ ಕೇಂದ್ರದಲ್ಲಿ ಮಂತ್ರಿಗಿರಿ ನೀಡಿ ಎಂಬ ಸಲಹೆ ನೀಡುವ ಸಾಧ್ಯತೆ ಇದೆ. ಒಟ್ಟಾರೆ ರೆಬೆಲ್ಸ್ ಟೀಮ್ ನ ಒಂದೇ ಹಠ ವಿಜಯೇಂದ್ರ ಅಧಿಕಾರದಿಂದ ಕೆಳಗೆ ಇಳಿಸುವುದು.
ವಿಜಯೇಂದ್ರ ಸರ್ಕಾರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪಕ್ಷದಲ್ಲಿ ಶೇ. 75ರಷ್ಟು ನಾಯಕರು ವಿಜಯೇಂದ್ರ ವಿರುದ್ಧ ಇದ್ದಾರೆ ಎಂಬ ವಾದವನ್ನು ಕೂಡ ಅಂದು ಮಾಡಬಹುದು. ಇನ್ನೊಂದೆಡೆ ರೆಬೆಲ್ಸ್ ಹಾಗೂ ತಟಸ್ಥ ತಂಡದ ವಿರುದ್ಧ ಕೂಡ ವಿಜಯೇಂದ್ರ ಟೀಮ್ ಹೊಸ ಪ್ಲ್ಯಾನ್ ಮಾಡುತ್ತಿದೆ. ಯತ್ನಾಳ್ ಹಾಗೂ ರೆಬಲ್ಸ್ ಟೀಮ್ ಪಕ್ಷ ಕಟ್ಟಿದವರ ವಿರುದ್ದವೇ ಮಾತನಾಡುತ್ತಿದೆ. ಬಹಿರಂಗವಾಗಿ ಹೇಳಿಕೆ ಕೊಡುವ ಮೂಲಕ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಟೀಮ್ ಆರೋಪ ಮಾಡಬಹುದು.
ಅಲ್ಲದೇ, ವಿಜಯೇಂದ್ರ ಟೀಮ್, ಪ್ರತಿಪಕ್ಷ ನಾಯಕ ಅರ್ ಅಶೋಕ್ ವಿರುದ್ದವೂ ಅಸಮಾಧಾನ ಹೊಂದಿದೆ ಎನ್ನಲಾಗಿದೆ. ಹೀಗಾಗಿ ತಟಸ್ಥ ಬಣದಲ್ಲಿರುವ ಅಶೋಕ್, ಬಸವರಾಜ್ ಬೊಮ್ಮಾಯಿ ವಿರುದ್ಧ ದೂರು ಸಲ್ಲಿಸುವ ಸಾಧ್ಯತೆ ಕೂಡ ಇದೆ. ಈ ನಡುವೆ ಉಸ್ತುವಾರಿ ಭೇಟಿಯಾಗಲು ರೇಣುಕಾಚಾರ್ಯ ಟೀಮ್ ಸಿದ್ಧವಾಗುತ್ತಿದೆ. ಬಿವೈವಿ ಬೆನ್ನಿಗೆ ನಿಂತು ಬ್ಯಾಟ್ ಬೀಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.