ಬೆಂಗಳೂರು: ರಾಜ್ಯ ರಾಜಧಾನಿಯ ನರನಾಡಿಯಂತಿರುವ ಮೆಟ್ರೋ ರೈಲುಗಳ ಬೆಲೆಯೇರಿಕೆಯಾಗಿದೆ. ಟಿಕೆಟ್ ದರವನ್ನು ಶೇ.45ರಿಂದ ಶೇ.100ರಷ್ಟು ಏರಿಕೆ ಮಾಡಿದ ಕಾರಣ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಭಾರಿ ಪ್ರಮಾಣದಲ್ಲಿ ಬೆಲೆಯೇರಿಕೆ ಮಾಡಿದ ಬಿಎಂಆರ್ ಸಿಎಲ್ ಗೆ ರಾಜಧಾನಿಯ ಜನ ಭಾರಿ ಪೆಟ್ಟು ಕೊಟ್ಟಿದ್ದಾರೆ. ಬೆಲಯೇರಿಕೆ ಬಳಿಕ ನಮ್ಮ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಂಠಿತವಾಗಿದ್ದು, ಆದಾಯಕ್ಕೆ ಕೊಡಲಿ ಏಟು ಬಿದ್ದಿದೆ.
ಹೌದು, ಬೆಲೆಯೇರಿಕೆಗೂ ಮೊದಲು ಬಿಎಂಆರ್ ಸಿಎಲ್ ಗೆ ನಮ್ಮ ಮೆಟ್ರೋ ರೈಲುಗಳಿಂದ ಪ್ರತಿ ದಿನ 2ರಿಂದ 2.5 ಕೋಟಿ ರೂ.ವರೆಗೆ ಆದಾಯ ಲಭಿಸುತ್ತಿತ್ತು. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾದ ಕಾರಣ ದಿನಕ್ಕೆ ಈಗ ಒಂದೂವರೆಯಿಂದ ಎರಡು ಕೋಟಿ ರೂ. ಮಾತ್ರ ಆದಾಯ ಲಭಿಸುತ್ತಿದೆ. ಬೆಲೆಯೇರಿಕೆ ಬಳಿಕ ದಿಢೀರನೆ ಪ್ರಯಾಣಿಕರ ಸಂಖ್ಯೆ ಕುಸಿದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.
ಮೆಟ್ರೋ ಟಿಕೆಟ್ ಬೆಲೆಯೇರಿಕೆ ಮಾಡುವ ಮೊದಲು ಅಂದರೆ, ಫೆಬ್ರವರಿ 8ರಂದು 8.07 ಲಕ್ಷ ಜನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಆದರೆ, ಬೆಲೆಯೇರಿಕೆಯ ನಂತರದ ದಿನವಾದ ಫೆ.9ರಂದು ಪ್ರಯಾಣಿಕರ ಸಂಖ್ಯೆ 6 ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ನಮ್ಮ ಮೆಟ್ರೋದ ಆದಾಯದಲ್ಲಿ ಶೇ.35-40ರಷ್ಟು ಕುಂಠಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಮೆಟ್ರೋ ಟಿಕೆಟ್ ದರವು ಮಿತಿಯಲ್ಲಿದ್ದ ಕಾರಣ ಹೆಚ್ಚಿನ ಜನ ಬೈಕ್, ಕಾರುಗಳನ್ನು ಬಿಟ್ಟು, ಮೆಟ್ರೋದಲ್ಲಿಯೇ ಪ್ರಯಾಣಿಸುತ್ತಿದ್ದರು. ಇದರಿಂದ ಅವರಿಗೆ ಸಮಯವೂ ಉಳಿಯುತ್ತಿತ್ತು. ಆದರೆ, ಈಗ ಮೆಟ್ರೋ ಬೆಲೆಯು ದುಪ್ಪಟ್ಟಾಗಿರುವ ಕಾರಣ ಬೈಕ್ ಗಳಲ್ಲಿಯೇ ಕಚೇರಿಗಳಿಗೆ ತೆರಳುವುದು ಅಥವಾ ಬಸ್ ಗಳಲ್ಲಿ ಸಂಚರಿಸುವುದೇ ಒಳಿತು ಎಂಬ ನಿರ್ಧಾರಕ್ಕೆ ಪ್ರಯಾಣಿಕರು ಬಂದಿದ್ದಾರೆ. ಇದೇ ಕಾರಣಕ್ಕಾಗಿ ಮೆಟ್ರೋಗಳಲ್ಲಿ ಸಂಚರಿಸುವವರ ಪ್ರಮಾಣ ಗಣನೀಯವಾಗಿ ಕುಸಿದಿದೆ ಎನ್ನಲಾಗಿದೆ.