ಬೆಂಗಳೂರು: ಸೈಬರ್ ವಂಚಕರ ಹಾವಳಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸ್ವಲ್ಪ ಮೈಮರೆತರೆ ಸಾಕು ಹಣ ಮಾಯವಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಒಂದಿಲ್ಲೊಂದು ಪ್ಲಾನ್ ರೂಪಿಸಿ, ಜನರನ್ನು ಯಾಮಾರಿಸುತ್ತಿದ್ದಾರೆ. ಈಗ ಸಹಾಯವಾಣಿ ಹೆಸರಿನಲ್ಲಿ ಕರೆ ಮಾಡಿ ಮಹಿಳೆಗೆ 2 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಬೆಂಗಳೂರಿನ 58 ವರ್ಷದ ಮಹಿಳೆಯೊಬ್ಬರಿಗೆ ಬ್ಯಾಂಕ್ ಪ್ರತಿನಿಧಿ ನಾನು. ಇದು ಬ್ಯಾಂಕ್ ನ ಸಹಾಯವಾಣಿ ಎಂದು ಕರೆ ಮಾಡಿ, ನಿಮ್ಮ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂ. ಹಣ ವರ್ಗಾವಣೆಯಾಗುತ್ತಿದೆ. ಈ ಹಣವನ್ನು ನೀವೇ ವರ್ಗಾಯಿಸಿದ್ದರೆ ಮೂರನ್ನು ಒತ್ತಿ, ಇಲ್ಲವಾಗಿದ್ದಲ್ಲಿ ಒಂದನ್ನು ಒತ್ತಿ’ ಎಂದು ಹೇಳಿದ್ದಾನೆ.
ಆಗ ಹಣ ಬೇರೆಯವರ ಖಾತೆಗೆ ಹೋಗುತ್ತದೆ ಎಂದು ಗಾಬರಿಗೊಂಡ ಮಹಿಳೆ 1 ಒತ್ತಿದ್ದಾರೆ. ಆನಂತರ ವಂಚಕ ನಿಮ್ಮ ಬ್ಯಾಂಕ್ ಮ್ಯಾನೇಜರ್ ರನ್ನು ಸಂಪರ್ಕಿಸಿ ಎಂದು ಕಾಲ್ ಕಟ್ ಮಾಡಿದ್ದಾನೆ. ಅನುಮಾನಗೊಂಡ ಮಹಿಳೆ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ ಖಾತೆಯಲ್ಲಿದ್ದ 2 ಲಕ್ಷ ರೂ. ಹಣ ಮಾಯವಾಗಿತ್ತು. ಕೂಡಲೇ ಮಹಿಳೆ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ (1930)ಗೆ ಪ್ರಾಥಮಿಕ ದೂರು ನೀಡಿ, ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.