ಬೆಂಗಳೂರು: ನಾಗರಭಾವಿ ಎರಡನೇ ಹಂತದ ಪಾಪ ರೆಡ್ಡಿಪಾಳ್ಯದಲ್ಲಿ(Reddypally) ಬಿಡಿಎ ಜೆಸಿಬಿ (BDA JCB)ಘರ್ಜಿಸಿದ್ದು, 49ಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ.
ಮಾಲೀಕ ಎಂದು ಹೇಳಿಕೊಳ್ಳುತ್ತಿದ್ದವನ ಯಡವಟ್ಟಿನಿಂದಾಗಿ ಕೂಲಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಈ ಜಾಗದ ವಿವಾದ ಕೋರ್ಟ್ ನಲ್ಲಿತ್ತು. ನಲ್ಲಪ್ಪ ಕೃಷ್ಣ ಮೂರ್ತಿ(Nallappa Krishna Murthy) ಹಾಗೂ ಬಿಡಿಎ ಮಧ್ಯೆ ಜಾಗಕ್ಕಾಗಿ ವಾದ ನಡೆದಿತ್ತು. ಆದರೆ, ಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು. ತೀರ್ಪು ಬಿಡಿಎ ಪರ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾಗ ತೆರವು ಮಾಡಿದ್ದಾರೆ. ಆದರೆ, ಯಾವುದೇ ಮಾಹಿತಿ ನೀಡದೆ ತೆರವು ಮಾಡಲಾಗುತ್ತಿದೆ ಎಂದು ಅಲ್ಲಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಲಿ ಮಾಡುತ್ತಿದ್ದ ಕುಟುಂಬಗಳು.ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ವೇಳೆ ತೆರವು ಕಾರ್ಯ ಆರಂಭ ಮಾಡಲಾಗಿದೆ ಎಂದು ಆರೋಪಿಸಿರುವ ಜನರು ಬೀದಿಯಲ್ಲೇ ಕುಳಿತಿದ್ದಾರೆ. ಇರಲು ಜಾಗ ಇಲ್ಲದ ಹಿನ್ನೆಲೆಯಲ್ಲಿ ಅಲ್ಲಿದ್ದ ಜನರು, ವಯಸ್ಸಾದವರು, ಮಕ್ಕಳು ಬೀದಿಯಲ್ಲಿ ಕುಳಿತಿದ್ದಾರೆ. ಈ ಕುಟುಂಬಸ್ಥರು ಪ್ರತಿ ತಿಂಗಳು ಮಾಲೀಕನಿಗೆ ಬಾಡಿಗೆ ನೀಡುತ್ತಿದ್ದವು. ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಈಗ ದಿಕ್ಕು ತೋಚದಂತಾಗಿ ಬೀದಿಗೆ ಬಿದ್ದ ಕುಟುಂಬಗಳು ಕಂಗಾಲಾಗಿವೆ.


















