ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ಜಿಲ್ಲೆಯಲ್ಲಿ ಆಳವಾದ ಕಂದಕ್ಕೆ ಸೇನಾ ವಾಹನ (Indian Army) ಉರುಳಿ ಬಿದ್ದ ಪರಿಣಾಮ ಐವರು ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ರಾಜ್ಯದ ಬೆಳಗಾವಿ ಯೋಧ (Belagavi Soldier) ಕೂಡ ಹುತಾತ್ಮರಾಗಿದ್ದಾರೆ.
ಚಿಕ್ಕೋಡಿ (Chikkodi) ತಾಲೂಕಿನ ಕುಪ್ಪನವಾಡಿ ಗ್ರಾಮದ ಧರ್ಮರಾಜ ಸುಭಾಷ ಖೋತ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಉರುಳಿ ಬಿದ್ದಿತ್ತು. ಈ ವಾಹನದಲ್ಲಿ ಇವರು ಕೂಡ ಇದ್ದರು.
ಘರೋವಾ ಪ್ರದೇಶದಲ್ಲಿ ಸಂಜೆ 5:20 ರ ಸುಮಾರಿಗೆ ಆರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ವಾಹನವು ಜಿಲ್ಲೆಯ ಬನೋಯ್ ಗೆ ತೆರಳುತ್ತಿತ್ತು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. 11 ಮದ್ರಾಸ್ ಲೈಟ್ ಇನ್ ಫೆಂಟ್ರಿಗೆ ಸೇರಿದ ವಾಹನವು ನಿಲಂ ಪ್ರಧಾನ ಕಚೇರಿಯಿಂದ ಬಲ್ನೋಯಿ ಘೋರಾ ಪೋಸ್ಟ್ ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸದ್ಯ ಆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಘಟನೆಯಲ್ಲಿ ಕೆಲವು ಸೈನಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಬಲಿಯಾಗಿರುವ ವಾಹನದಲ್ಲಿ 18 ಸೈನಿಕರು ಇದ್ದರು ಎನ್ನಲಾಗಿದೆ.