ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರೆದಿದ್ದು, ಹಣ ವರ್ಗಾವಣೆಯ ಜಾಲ ಪತ್ತೆ ಮಾಡಿದೆ.
ನಿಗಮದಿಂದ ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ 34 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಇತ್ತೀಚೆಗೆಷ್ಟೇ ತನಿಖೆ ಎದುರಿಸಿದ್ದ ಜೀವಾ ಅವರ ಖಾತೆಗೆ 7.16 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎನ್ನಲಾಗಿದೆ. ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ, ಮಾಜಿ ಅಧೀಕ್ಷಕ ಸುಬ್ಬಪ್ಪ ಅವರು ತಮ್ಮ ನೆರೆಹೊರೆಯವರು, ಬಾಡಿಗೆದಾರರು ಸಂಬಂಧಿಕರ ಹೆಸರಿನಲ್ಲಿ ನಕಲಿ ಕಂಪನಿ ತೆರೆದಿದ್ದು, ಅವರ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ, ಐದು ದಿನಗಳ ಹಿಂದೆ ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಜೀವಾಗೆ ಸೇರಿದ್ದ ಅನ್ನಿಕಾ ಎಂಟರ್ ಪ್ರೈಸ್ ಕಂಪನಿಗೆ 7.16 ಕೋಟಿ ರೂ. ಹಾಗೂ ಅವರ ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್ ಕಂಪನಿಗೆ 3.79 ಕೋಟಿ ರೂ. ಸೇರಿ ಒಟ್ಟು 10.9 ಕೋಟಿ ರೂ. ಹಣ ವರ್ಗಾವಣೆಯಾಗಿದೆ. ನಿಗಮದ ಸಿಬ್ಬಂದಿ ಯಶಸ್ವಿನಿ ಅವರಿಗೆ ಸೇರಿತ್ತು ಎನ್ನಲಾದ ಡ್ರೀಮ್ ಎಂಟರ್ ಪ್ರೈಸಸ್ ಕಂಪನಿಗೆ 8.78 ಕೋಟಿ ರೂ. ಹಾಗೂ ಯಶಸ್ವಿನಿ ಸಹೋದರ ಕಾರ್ತೀಕ್ ಗೌಡ ಹೆಸರಿನಲ್ಲಿನ ಆದಿತ್ಯ ಎಂಟರ್ ಪ್ರೈಸಸ್ ಕಂಪನಿಗೆ 4.76 ಕೋಟಿ ರೂ. ಹಣ ಪತ್ತೆಯಾಗಿರುವುದು ಗೊತ್ತಾಗಿದೆ. ನಿಗಮದ ಪ್ರಧಾನ ವ್ಯವಸ್ಥಾಪಕನ ಆಪ್ತ ಸಿ.ಸಂತೋಷ ಹೆಸರಿನಲ್ಲಿನ ಸೋಮನಾಥೇಶ್ವರ ಎಂಟರ್ ಪ್ರೈಸಸ್ ಕಂಪೆನಿಗೆ ಬರೋಬ್ಬರಿ 9.66 ಕೋಟಿ ರೂ. ವರ್ಗಾವಣೆಯಾಗಿದೆ. ಕಾಂತ ಒಡೆಯರ್ ಹೆಸರಿನ ನ್ಯೂ ಡ್ರೀಮ್ ಎಂಟರ್ ಪ್ರೈಸಸ್ ಕಂಪನಿ 11.40 ಕೋಟಿ ರೂ., ಪದ್ಮಾ ಎಂಬ ಬ್ಯಾಂಕ್ ಅಕೌಂಟ್ಗೆ ನಿಗಮ ಮತ್ತು ಬ್ಯಾಂಕ್ ಪಿಆರ್ಒ ಅಭಿಲಾಶ್ ಅವರಿಗೆ ಸೇರಿದ ಎನ್ನಲಾಗಿರುವ ಕಂಪನಿಗೆ 1.26 ಕೋಟಿ ರೂ., ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಸೋದರಿ ಮಂಗಳ ರಾಮು ಬ್ಯಾಂಕ್ ಅಕೌಂಟ್ ಗೆ 1.48 ಕೋಟಿ ರೂ. ಹಣ ವರ್ಗಾವಣೆಯಾಗಿದ್ದು, ಒಟ್ಟು 90 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆದಿರುವುದನ್ನು ಸಿಐಡಿ ಪತ್ತೆ ಮಾಡಿದೆ.