ಬೆಂಗಳೂರು: ಆಂಬ್ಯುಲೆನ್ಸ್ ಗೆ ದಾರಿ ಬಿಡುವ ವೇಳೆ ನಿಯಮ ಉಲ್ಲಂಘಿಸಿದರೆ ತಪ್ಪಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹಾಗೂ ಸಂಚಾರ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾರಿ ಬಿಟ್ಟಾಗ ಚಲನ್ ಆದರೆ ಅವರ ಟ್ರಾಫಿಕ್ ಫೈನ್ ಮನ್ನಾ ಮಾಡುತ್ತೇವೆ. ಆಂಬ್ಯುಲೆನ್ಸ್ಗೆ ದಾರಿ ಬಿಟ್ಟಾಗ ದಂಡ ಬೀಳಲ್ಲ. ಒಂದು ವೇಳೆ ಫೈನ್ ಬಿದ್ದರೆ ಅದನ್ನು ಪ್ರಶ್ನೆ ಮಾಡಬಹುದು. ನಂತರ ನಾವು ಮನ್ನಾ ಮಾಡುತ್ತೇವೆ ಎಂದಿದ್ದಾರೆ.
ನಗರದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಎಐ ಬಳಕೆ ಮಾಡಲಾಗುತ್ತಿದೆ. ಇತ್ತೀಚೆಗೆ ನಗರದಲ್ಲಿ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು, ನಗರದಲ್ಲಿ 60 ಜಂಕ್ಷನ್ಗಳಲ್ಲಿ ಈ ತಂತ್ರಜ್ಞಾನ ಯಶಸ್ವಿ ಆಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಶೇ.68ರಷ್ಟು ದ್ವಿಚಕ್ರ ವಾಹನಗಳಿವೆ. ಬೆಂಗಳೂರಿನಲ್ಲಿ ಲಕ್ಷಾಂತರ ವಾಹನಗಳು ಓಡಾಡುತ್ತಿವೆ. 165 ಜಂಕ್ಷನ್ಗಳಲ್ಲಿ ಎಐ ತಂತ್ರಜ್ಞಾನ ಅಳವಡಿಕೆಯಾಗಿದೆ. ನಾಲ್ಕು ಮೋಡ್ಗಳಲ್ಲಿ ಈ ತಂತ್ರಜ್ಞಾನ ನಿರ್ವಹಣೆ ಮಾಡುತ್ತೆ. ಸಿಗ್ನಲ್ ಬಳಿ ಎಷ್ಟು ವಾಹನಗಳಿವೆ. ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳಿವೆ, ಅದನ್ನ ಗಣಿತ ಮಾಡಿ ಸಿಗ್ನಲ್ ಬಿಡುತ್ತೇವೆ ಎಂದು ಹೇಳಿದ್ದಾರೆ.
20 ಸೆಕೆಂಡ್ ಸಿಗ್ನಲ್ ಇದ್ದರೆ 10 ಸೆಕೆಂಡ್ ನಲ್ಲಿ ವಾಹನಗಳು ಖಾಲಿ ಆಗುತ್ತಿದ್ದವು. ಇನ್ನು ಹತ್ತು ಸೆಕೆಂಡ್ ಖಾಲಿ ಇರುತ್ತಿತ್ತು. ಇನ್ಮುಂದೆ ಈ ವಿಚಾರದಲ್ಲೂ ತಂತ್ರಜ್ಞಾನ ಬಳಕೆ ಆಗುತ್ತಿದೆ. ಎಷ್ಟು ವಾಹನಗಳು ಇದ್ದಾವೆ ಎಷ್ಟು ಸೆಕೆಂಡ್ ನಲ್ಲಿ ವಾಹನಗಳು ಖಾಲಿಯಾದವು ಅದನ್ನು ಡಿಟೆಕ್ಟ್ ಮಾಡಿ ಸಿಗ್ನಲ್ ಚೇಂಜ್ ಆಗುತ್ತದೆ ಎಂದಿದ್ದಾರೆ.