ನವದೆಹಲಿ: ಶುಕ್ರವಾರ ರಾತ್ರೋರಾತ್ರಿ ಭಾರತದ ಮೇಲೆ ದಾಳಿಗೆ ಯತ್ನಿಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. ಅದರಲ್ಲೂ, ಪಾಕಿಸ್ತಾನದ ಮೂರು ವಾಯುನೆಲೆಗಳನ್ನು ಭಾರತೀಯ ಸೇನೆಯು ಧ್ವಂಸಗೊಳಿಸಿದ್ದು, ಬೆಚ್ಚಿಬಿದ್ದ ಪಾಕಿಸ್ತಾನದ ಸೇನೆಯು ಬೆಳಗಿನ ಜಾವ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿದೆ. ಭಾರತವು ಮೂರು ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ ಎಂದು ಪಾಕಿಸ್ತಾನದ ಸೇನೆಯೇ ತಿಳಿಸಿದೆ.
ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿಯು ಬೆಳಗಿನ ಜಾವ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. “ಪಾಕಿಸ್ತಾನ ವಾಯುಪಡೆಯ ನೂರ್ ಖಾನ್ (ಚಕ್ಲಾಲಾ, ರಾವಲ್ಪಿಂಡಿ), ಮುರಿಯ್ (ಚಕ್ವಾಲ್) ಮತ್ತು ರಫೀಕಿ (ಜಾಂಗ್ ಜಿಲ್ಲೆಯ ಶೋರ್ಕೋಟ್) ವಾಯುನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿದೆ” ಎಂದು ಆತುರಾತುರದಲ್ಲಿ ಇಸ್ಲಾಮಾಬಾದ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಭಾರತದ ವಾಯುದಾಳಿಗೆ ಮೂರೂ ವಾಯುನೆಲೆಗಳು ಧ್ವಂಸಗೊಂಡಿವೆ ಎಂದು ತಿಳಿದುಬಂದಿದೆ. ಆದರೆ, ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿಯ ಮಾತ್ರ, ವಾಯುಪಡೆಯ ಎಲ್ಲಾ ಸ್ವತ್ತುಗಳು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ. ಭಾರತವು ತನ್ನ ಜೆಟ್ ಮೂಲಕ ಗಾಳಿಯಿಂದ ಮೇಲ್ಮೈಗೆ ಕ್ಷಿಪಣಿಗಳನ್ನು ಹಾರಿಸಿದೆ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯು ಹಲವಾರು ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದು ತಿಳಿಸಿದ್ದಾರೆ. ಹಾಗೆಯೇ, ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಹೋಗಿದ್ದಾರೆ.
ಭಾರತದ ಸುಮಾರು 26 ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ರಾತ್ರೋರಾತ್ರಿ ದಾಳಿ ನಡೆಸಿದೆ. ಇದಕ್ಕೆ ಭಾರತವೂ ಪ್ರತಿದಾಳಿ ನಡೆಸುತ್ತಿದೆ. ಜಮ್ಮು ಬಳಿಯ ಪಾಕಿಸ್ತಾನದ ಉಗ್ರರ ನೆಲೆಯೊಂದನ್ನು ಭಾರತೀಯ ಸೇನೆಯು ಧ್ವಂಸಗೊಳಿಸಿದೆ. ಇದೇ ವೇಳೆ, ಭಾರತವು ಪಾಕಿಸ್ತಾನದ ನೂರಾರು ಡ್ರೋನ್ ಗಳನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ