ಕಾರವಾರ: ಇಬ್ಬರು ಯುವತಿಯರು ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗೋಕರ್ಣದ ಜಟಾಯು ತೀರ್ಥದ ಹತ್ತಿರ ಈ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಚಾರಣಕ್ಕೆ ಒಟ್ಟು 23 ಜನರ ತಂಡ ತೆರಳಿತ್ತು. ಈ ಸಂದರ್ಭದಲ್ಲಿ ಸಮುದ್ರದ ಅಂಚಿನ ಬಂಡೆ ಮೇಲೆ ನಾಲ್ವರು ಕುಳಿತಿದ್ದರು. ಈ ವೇಳೆ ರಭಸವಾಗಿ ಅಲೆ ಬಂದಿದೆ. ಅಲೆ ಬಡಿದು ಇಬ್ಬರು ಸಮುದ್ರಕ್ಕೆ ಹಾಗೂ ಮತ್ತೆ ಇಬ್ಬರು ಬಂಡೆಯ ಪಕ್ಕ ಬಿದ್ದು ಗಾಯಗೊಂಡಿದ್ದಾರೆ.

ಸಮುದ್ರದ ಪಾಲಾದವರು ತಮಿಳನಾಡು ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದ ಕೊನೆಯ ವರ್ಷದ ಪರೀಕ್ಷೆ ಮುಗಿಸಿದ್ದರು ಎನ್ನಲಾಗಿದೆ. ಸಿಂದುಜಾ ಮತ್ತು ಕನ್ನಿಮೊಳಿ ಎಂಬ ಹೆಸರಿನ ಇಬ್ಬರು ಯುವತಿಯರು ಸಾವನ್ನಪ್ಪಿದವರು ಎನ್ನಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.