ಪಾರದೀಪ್ : ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯಲ್ಲಿ ನಡೆದ ಘೋರ ಕೃತ್ಯವೊಂದು ಮಾನವೀಯತೆ ನಿಜಕ್ಕೂ ಉಳಿದುಕೊಂಡಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. 23 ವರ್ಷದ ಯುವತಿಯೊಬ್ಬಳ ಮೇಲೆ ಒಂದೇ ದಿನ ಇಬ್ಬರು ಕಾಮುಕರು ಅತ್ಯಾಚಾರಗೈದಿದ್ದಲ್ಲದೇ, ಅಂತಿಮವಾಗಿ ಅದೇ ದಿನ ರಾತ್ರಿ ನಾಲ್ಕು ಅಂತಸ್ತಿನ ಕಟ್ಟಡದಿಂದ ಆಕೆಯನ್ನು ಕೆಳಕ್ಕೆ ಎಸೆದು ಕೊಲ್ಲಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಫೆಬ್ರವರಿ 22 ರಂದು ಈ ದುರಂತದ ಸರಣಿ ಆರಂಭವಾಗಿದೆ. ಸಂತ್ರಸ್ತ ಯುವತಿಯು ತನ್ನ ಪ್ರಿಯತಮನನ್ನು ಮದುವೆಯಾಗುವ ಆಸೆಯಿಂದ ಮನೆಯಿಂದ ಹೊರಬಂದಿದ್ದಳು. ದೇವಸ್ಥಾನವೊಂದರಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದ ಪ್ರಿಯತಮ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಆಕೆಯನ್ನು ಅಸಹಾಯಕ ಸ್ಥಿತಿಯಲ್ಲಿ ರಹಮಾ ಬಸ್ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಜಗತ್ಸಿಂಗ್ಪುರ ಪೊಲೀಸ್ ಅಧೀಕ್ಷಕ ಅಂಕಿತ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ನೆರವಿನ ನೆಪದಲ್ಲಿ ಬಂದ ಮತ್ತೊಬ್ಬ ಕಾಮುಕ
ಬಸ್ ನಿಲ್ದಾಣದಲ್ಲಿ ಕಂಗಾಲಾಗಿ ಕುಳಿತಿದ್ದ ಯುವತಿಯನ್ನು ಕಂಡ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬ ಸಹಾಯ ಮಾಡುವ ನೆಪದಲ್ಲಿ ಹತ್ತಿರ ಬಂದಿದ್ದಾನೆ. ಪಾರದೀಪ್ಗೆ ತನ್ನ ಬೈಕ್ನಲ್ಲಿ ಬಿಡುವುದಾಗಿ ನಂಬಿಸಿ ಆಕೆಯನ್ನು ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಮತ್ತೊಮ್ಮೆ ಅತ್ಯಾಚಾರವೆಸಗಿದ ಕಾಮುಕ, ತನ್ನ ಕೃತ್ಯ ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಆಕೆಯನ್ನು ಕಟ್ಟಡದ ಮೇಲ್ಛಾವಣಿಯಿಂದ ಕೆಳಕ್ಕೆ ತಳ್ಳಿದ್ದಾನೆ. ಮರುದಿನ ಬೆಳಗ್ಗೆ ಯುವತಿಯ ಅನಾಥ ಶವ ಕಟ್ಟಡದ ಕೆಳಗೆ ಪತ್ತೆಯಾಗಿದೆ.
ಈ ಘಟನೆಯು ಒಡಿಶಾ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?” ಎಂದು ಪ್ರಶ್ನಿಸಿರುವ ಅವರು, ರಾಜ್ಯದಲ್ಲೀಗ ಅಪ್ರಾಪ್ತರಿಂದ ಹಿಡಿದು ವಿಕಲಚೇತನ ಯುವತಿಯರವರೆಗೆ ಯಾರೂ ಸುರಕ್ಷಿತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೇವಲ ಭಾಷಣಗಳಿಗೆ ಸೀಮಿತವಾಗದೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮಹಿಳೆಯರಲ್ಲಿ ಧೈರ್ಯ ತುಂಬಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ನಿಲ್ಲದ ಫೈನಾನ್ಸ್ ಕಂಪನಿಗಳ ಕಿರುಕುಳ | ಹಸುಗೂಸ ಸಮೇತ ಬೀದಿಗೆ ಬಿದ್ದ ಕುಟುಂಬ!



















