ಬೆಂಗಳೂರು: ಐಪಿಎಲ್ 2025ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ಗೆ ಸಂಬಂಧಿಸಿದಂತೆ ಒಂದು ದೊಡ್ಡ ವಿವಾದ ಸೃಷ್ಟಿಯಾಗಿದೆ. ಈ ಪಂದ್ಯದಲ್ಲಿ ಬ್ರೆವಿಸ್ರನ್ನು ಲೆಗ್ ಬಿಫೋರ್ ವಿಕೆಟ್ ಎಂದು ಅಂಪೈರ್ ಗಳು ಘೋಷಿಸಿದರು. ರಿಪ್ಲೇಗಳು ಬಾಲ್ ಸ್ಟಂಪ್ಗೆ ತಗಲದೇ ಇದ್ದದ್ದನ್ನು ತೋರಿಸಿದವು. ಆದರೆ, ಅವರಿಗೆ ಡಿಸಿಷನ್ ರಿವ್ಯೂ ಸಿಸ್ಟಮ್ (DRS) ಮೂಲಕ ತೀರ್ಪನ್ನು ಪರಿಶೀಲಿಸಲು ಅವಕಾಶ ನೀಡಲಿಲ್ಲ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆದಿದ್ದು, ಅಂಪೈರ್ಗಳ ತೀರ್ಪು ಮತ್ತು ಡಿಆರ್ಎಸ್ ನಿಯಮಗಳ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ಮುಖಾಮುಖಿಯಾದವು. ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿ 213 ರನ್ಗಳ ದೊಡ್ಡ ಮೊತ್ತವನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತಾದರೂ, ಯುವ ಬ್ಯಾಟ್ಸ್ಮನ್ ಆಯುಷ್ ಮಾತ್ರೆ (94 ರನ್) ಮತ್ತು ರವೀಂದ್ರ ಜಡೇಜಾ (77* ರನ್) ಅವರ ಜವಾಬ್ದಾರಿಯುತ ಆಟದಿಂದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿತು. ಆದರೆ, 17ನೇ ಓವರ್ನಲ್ಲಿ ಡೆವಾಲ್ಡ್ ಬ್ರೆವಿಸ್ರ ವಿವಾದಾತ್ಮಕ ಔಟ್ ಸಿಎಸ್ಕೆ ದೊಡ್ಡ ಹಿನ್ನಡೆಯಾಯಿತು. ಹೀಗಾಗಿ 2 ರನ್ಗಳಿಂದ ಸೋಲನ್ನು ಅನುಭವಿಸಿತು.
ವಿವಾದವೇನು?
17ನೇ ಓವರ್ನ ಮೂರನೇ ಎಸೆತದಲ್ಲಿ ಆರ್ಸಿಬಿ ವೇಗಿ ಲುಂಗಿ ಎನ್ಗಿಡಿ ಡೆವಾಲ್ಡ್ ಬ್ರೆವಿಸ್ಗೆ ಒಂದು ಫುಲ್ ಟಾಸ್ ಎಸೆತವನ್ನು ಎಸೆದರು. ಈ ಎಸೆತವು ಬ್ರೆವಿಸ್ರ ಕಾಲಿನ ಪ್ಯಾಡ್ಗೆ ತಾಗಿತು. ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ತಕ್ಷಣವೇ ಎಲ್ಬಿಡಬ್ಲ್ಯು ಔಟ್ ಎಂದು ತೀರ್ಪು ನೀಡಿದರು. ಬ್ರೆವಿಸ್ ಮತ್ತು ರವೀಂದ್ರ ಜಡೇಜಾ ಈ ತೀರ್ಪಿನ ಬಗ್ಗೆ ಚರ್ಚಿಸಿದರು ಮತ್ತು ಡಿಆರ್ಎಸ್ ಮೂಲಕ ತೀರ್ಪನ್ನು ಪರಿಶೀಲಿಸಲು ನಿರ್ಧರಿಸಿದರು. ಆದರೆ, ಅವರು ಡಿಆರ್ಎಸ್ಗೆ ಮನವಿ ಮಾಡುವಾಗ 15 ಸೆಕೆಂಡ್ಗಳ ಸಮಯ ಮೀರಿತ್ತು ಎಂದು ಅಂಪೈರ್ಗಳು ತಿಳಿಸಿದರು. ಹೀಗಾಗಿ ಬ್ರೆವಿಸ್ಗೆ ಅವಕಾಶ ನಿರಾಕರಿಸಲಾಯಿತು.
ರಿಪ್ಲೇಗಳನ್ನು ಪರಿಶೀಲಿಸಿದಾಗ, ಎನ್ಗಿಡಿಯ ಎಸೆತವು ಲೆಗ್ ಸ್ಟಂಪ್ಗಿಂತ ತೀರಾ ದೂರದಿಂದ ಹಾದುಹೋಗಿತ್ತು, ಅಂದರೆ ಬ್ರೆವಿಸ್ ಸ್ಪಷ್ಟವಾಗಿ ಔಟ್ ಆಗಿರಲಿಲ್ಲ. ಒಂದು ವೇಳೆ ಡಿಆರ್ಎಸ್ ಪರಿಶೀಲನೆ ನಡೆದಿದ್ದರೆ, ಬ್ರೆವಿಸ್ ಔಟಾಗುತ್ತಿರಲಿಲ್ಲ ಮತ್ತು ಸಿಎಸ್ಕೆ ಗೆಲುವಿನ ಸಾಧ್ಯತೆ ಇನ್ನಷ್ಟು ಹೆಚ್ಚಾಗುತ್ತಿತ್ತು.
ಡಿಆರ್ಎಸ್ ನಿಯಮಗಳೇನು ಹೇಳುತ್ತವೆ?
ಡಿಆರ್ಎಸ್ ನಿಯಮಗಳ ಪ್ರಕಾರ, ಆನ್-ಫೀಲ್ಡ್ ಅಂಪೈರ್ನ ತೀರ್ಪನ್ನು ಸವಾಲು ಮಾಡಲು ಬ್ಯಾಟ್ಸ್ಮನ್ ಅಥವಾ ಫೀಲ್ಡಿಂಗ್ ತಂಡಕ್ಕೆ ಕೇವಲ 15 ಸೆಕೆಂಡ್ಗಳ ಸಮಯವಿರುತ್ತದೆ. ಈ ಸಮಯದೊಳಗೆ ಸನ್ನೆ ಮಾಡದಿದ್ದರೆ, ರಿವ್ಯೂ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ, ಎಷ್ಟೇ ರಿವ್ಯೂಗಳು ಉಳಿದಿದ್ದರೂ ಸಹ. ಈ ಪಂದ್ಯದಲ್ಲಿ, ಬ್ರೆವಿಸ್ ಔಟ್ ಘೋಷಣೆಯಾದ ನಂತರ ಓಡುವುದರಲ್ಲಿ ಗಮನವಿಟ್ಟಿದ್ದರು ಮತ್ತು ರವೀಂದ್ರ ಜಡೇಜಾ ಜೊತೆ ಚರ್ಚೆಯಲ್ಲಿ ತೊಡಗಿದ್ದರು. ಈ ವೇಳೆಗೆ 15 ಸೆಕೆಂಡ್ಗಳ ಸಮಯ ಮುಗಿದಿತ್ತು ಎಂದು ಅಂಪೈರ್ಗಳು ತಿಳಿಸಿದರು.
ಇಲ್ಲಿ ಪ್ರಮುಖ ವಿವಾದದ ಅಂಶವೆಂದರೆ, ಡಿಆರ್ಎಸ್ ಟೈಮರ್ ಅನ್ನು ಸ್ಟೇಡಿಯಂನ ದೊಡ್ಡ ತೆರೆಯ ಮೇಲೆ ತೋರಿಸಲಾಗಿರಲಿಲ್ಲ. ಸಾಮಾನ್ಯವಾಗಿ, ಔಟ್ ತೀರ್ಪು ನೀಡಿದ ತಕ್ಷಣ 15 ಸೆಕೆಂಡ್ಗಳ ಟೈಮರ್ ತೆರೆಯ ಮೇಲೆ ಚಲಿಸುತ್ತದೆ, ಇದು ಬ್ಯಾಟ್ಸ್ಮನ್ ಮತ್ತು ತಂಡಕ್ಕೆ ಸಮಯದ ಒತ್ತಡವನ್ನು ತಿಳಿಸುತ್ತದೆ. ಆದರೆ, ಈ ಬಾರಿ ಟೈಮರ್ ತೋರಿಸದಿರುವುದರಿಂದ ಬ್ರೆವಿಸ್ ಮತ್ತು ಜಡೇಜಾ ಸಮಯದ ಬಗ್ಗೆ ಗೊಂದಲಕ್ಕೊಳಗಾದರು ಎಂದು ಹಲವರು ವಾದಿಸಿದ್ದಾರೆ.
ಅಂಪೈರ್ಗಳ ತಪ್ಪೇ?
ಮಾಜಿ ಅಂತಾರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, DRS ಟೈಮರ್ ಅನ್ನು ತೆರೆಯ ಮೇಲೆ ತೋರಿಸದಿರುವುದು ಒಂದು ತಪ್ಪು ಎಂದಿದ್ದಾರೆ. ಆದರೆ, ಅವರು ಬ್ರೆವಿಸ್ ಮತ್ತು ಜಡೇಜಾ ತಪ್ಪು ಮಾಡಿದ್ದಾರೆ ಎಂದೂ ದೂಷಿಸಿದ್ದಾರೆ. ಅಂಪೈರ್ ನಿತಿನ್ ಮೆನನ್ರ ತೀರ್ಪಿನ ಬಗ್ಗೆಯೂ ತೀವ್ರ ಟೀಕೆಗಳು ಕೇಳಿಬಂದಿವೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾನ್ ಈ ತೀರ್ಪನ್ನು “ಭಯಂಕರ ತಪ್ಪು” ಎಂದು ಕರೆದಿದ್ದಾರೆ.
ರಿಪ್ಲೇಗಳು ಬಾಲ್ ಸ್ಟಂಪ್ಗೆ ತಗಲದಿರುವುದನ್ನು ಸ್ಪಷ್ಟವಾಗಿ ತೋರಿಸಿತ್ತು ಎಂದಿದ್ದಾರೆ.
ಬ್ರೆವಿಸ್ರ ಗೋಲ್ಡನ್ ಡಕ್ (0 ರನ್) CSKಗೆ ದೊಡ್ಡ ಹೊಡೆತವಾಗಿತ್ತು. ಆದರೂ, ರವೀಂದ್ರ ಜಡೇಜಾ (77* ರನ್) ಮತ್ತು ಆಯುಷ್ ಮಾತ್ರೆ (94 ರನ್) ಅವರ ಶ್ರಮದಿಂದ CSK 211/7 ರನ್ಗಳನ್ನು ಗಳಿಸಿತು, ಆದರೆ 2 ರನ್ಗಳಿಂದ ಸೋಲನ್ನು ಅನುಭವಿಸಿತು. RCBಗೆ ಈ ಗೆಲುವು ಐಪಿಎಲ್ 2025ರಲ್ಲಿ CSK ವಿರುದ್ಧ ಮೊದಲ ಬಾರಿಗೆ ಡಬಲ್ (ಎರಡೂ ಪಂದ್ಯಗಳಲ್ಲಿ ಗೆಲುವು) ಸಾಧಿಸಿತು.