ಚೆನ್ನೈ: ಕನ್ನಡ ಭಾಷೆಯು ತಮಿಳಿನಿಂದ ಉಗಮವಾಯಿತು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಲ್ಲದೇ, ಕನ್ನಡಿಗರ ಕ್ಷಮೆ ಕೋರುವುದಿಲ್ಲ ಎಂದು ಉದ್ಧಟತನದ ಮಾತುಗಳನ್ನಾಡಿರುವ ಬಹುಭಾಷಾ ನಟ ಕಮಲ್ ಹಾಸನ್ ಅವರನ್ನು ಬೆಂಬಲಿಸಿ ಅವರ ಪಕ್ಷದ ಕಾರ್ಯಕರ್ತರು ಚೆನ್ನೈನಾದ್ಯಂತ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ಕಮಲ್ ಹಾಸನ್ ಅವರ ರಾಜಕೀಯ ಪಕ್ಷವಾದ ಮಕ್ಕಳ್ ನೀಧಿ ಮಯ್ಯಂ(ಎಂಎನ್ಎಂ) ಕಾರ್ಯಕರ್ತರು ತಮಿಳುನಾಡಿನ ಚೆನ್ನೈನಲ್ಲಿ ತಮ್ಮ ನಾಯಕನ ಬೆಂಬಲಕ್ಕೆ ನಿಂತಿದ್ದು, ಎಲ್ಲೆಡೆ ಕಮಲ್ ಪೋಸ್ಟರ್ ರಾರಾಜಿಸುತ್ತಿವೆ. “ತಮಿಳಿನಿಂದಲೇ ಕನ್ನಡ ಹುಟ್ಟಿತು ಎಂಬುದು ಇತಿಹಾಸದ ಸತ್ಯ. ಜಗತ್ತಿಗೆ ತಿಳಿದಿರುವ ಸತ್ಯವನ್ನೇ ಕಮಲ್ ಹಾಸನ್ ಹೇಳಿದ್ದಾರೆ” ಎಂಬ ಬರಹವಿರುವ ಪೋಸ್ಟರ್ಗಳನ್ನು ಎಂಎನ್ಎಂ ಸದಸ್ಯರು ಅಂಟಿಸಿದ್ದಾರೆ. ಇದಷ್ಟೇ ಅಲ್ಲದೆ, “ಎರಡು ಭಾಷೆಗಳ ನಡುವಿನ ಸಂಬಂಧವನ್ನು ಅವರು ತಿಳಿಸಿದ್ದಾರೆ”, “ಸತ್ಯ ಯಾವತ್ತೂ ತಲೆ ಬಾಗುವುದಿಲ್ಲ” ಎಂಬ ಪೋಸ್ಟರ್ ಗಳೂ ಚೆನ್ನೈನಾದ್ಯಂತ ಕಾಣಸಿಗುತ್ತಿವೆ.
ಇದೇ ವೇಳೆ, ಕರ್ನಾಟಕದಲ್ಲಿ ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂಬ ಕನ್ನಡ ಸಂಘಟನೆಗಳು ಹಾಗೂ ಕನ್ನಡ ಚಿತ್ರರಂಗದ ನಿರ್ಧಾರಕ್ಕೆ ಪ್ರತಿಯಾಗಿ ತಮಿಳುನಾಡಿನ ಕೆಲವು ಸಂಘಟನೆಗಳು ಕರ್ನಾಟಕದ ಚಿತ್ರಗಳಿಗೆ ತಮಿಳುನಾಡಿನಲ್ಲಿ ನಿಷೇಧ ಹೇರಬೇಕೆಂದು ಒತ್ತಾಯಿಸಿವೆ. ತಮಿಳಗ ವಾಳ್ವುರಿಮೈ ಕಚ್ಚಿಯ ನಾಯಕ ಟಿ. ವೇಲ್ಮುರುಗನ್, “ಕರ್ನಾಟಕದಲ್ಲಿ ‘ಥಗ್ ಲೈಫ್’ ಬಿಡುಗಡೆಯಾಗದಿದ್ದರೆ, ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಕಮಲ್ ಹಾಸನ್ ಅವರು ಚೆನ್ನೈನಲ್ಲಿ ಮೇ 24 ರಂದು ‘ಥಗ್ ಲೈಫ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, “ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ” ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕರ್ನಾಟಕದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು, ಕಮಲ್ ಹಾಸನ್ ಅವರಿಗೆ ಕ್ಷಮೆಯಾಚನೆಗೆ 24 ಗಂಟೆಗಳ ಗಡುವು ನೀಡಿದ್ದವು. ಆದರೆ, ಕಮಲ್ ಹಾಸನ್, “ನಾನು ತಪ್ಪು ಮಾಡಿದ್ದರೆ ಮಾತ್ರ ಕ್ಷಮೆ ಕೇಳುತ್ತೇನೆ, ಇಲ್ಲದಿದ್ದರೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದರು. ಹೀಗಾಗಿ ವಿವಾದವು ಮುಂದುವರಿದಿದೆ.
ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಕೂಡ ಪ್ರತಿಕ್ರಿಯಿಸಿ, ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ‘ಥಗ್ ಲೈಫ್’ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅನುಮತಿಸುವುದಿಲ್ಲ ಎಂದು ಘೋಷಿಸಿತು. ಕೆಎಫ್ಸಿಸಿ ಅಧ್ಯಕ್ಷ ಎಂ. ನರಸಿಂಹಲು, “ಇದು ಕೇವಲ ಚಿತ್ರರಂಗದ ವಿಷಯವಲ್ಲ, ಇದು ರಾಜ್ಯ ಮತ್ತು ಭಾಷೆಯ ಅಸ್ಮಿತೆಯ ವಿಷಯವಾಗಿದೆ” ಎಂದು ಹೇಳಿದ್ದಾರೆ. ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳು ಬೆಂಗಳೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ, ಕಮಲ್ ಹಾಸನ್ ಅವರ ಭಾವಚಿತ್ರಗಳನ್ನು ಸುಟ್ಟು, ಚಿತ್ರದ ಪೋಸ್ಟರ್ಗಳನ್ನು ಹರಿದು ಹಾಕಿವೆ.