ತುಮಕೂರು.: 10 ವರ್ಷಗಳ ಹಿಂದಿನ ಜಾತಿ ಗಣತಿ ವರದಿಯನ್ನು ಪ್ರಕಟಿಸುವುದು ನ್ಯಾಯಯೋಚಿತವಲ್ಲ. ಜಾತಿಗಣತಿಯನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ಹೊಸ ಸಮೀಕ್ಷೆ ಮಾಡಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀ ಅಭಿಪ್ರಾಯ ಪಟ್ಟಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಸರ್ಕಾರ ಸಮಿತಿ ರಚನೆ ಮಾಡಿ ಜಾತಿಗಣನೆ ಮಾಡಿದೆ. ಅದರ ಆಧಾರದ ಮೇಲೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿನ್ನೆಲೆ ತಿಳಿದುಕೊಂಡು. ಆಯಾ ವರ್ಗಗಳಿಗೆ ನ್ಯಾಯ ಒದಗಿಸಬೇಕೆನ್ನುವಂತದ್ದು ಶ್ಲಾಘನೀಯವಾಗಿರುವ ಕಾರ್ಯ. ಆದರೆ, ಈಗಿನ ಈ ಜಾತಿ ಸಮೀಕ್ಷೆಯ ವಿಚಾರವಾಗಿ ಬಹುತೇಕರು ನಮಗೆ ಗೊತ್ತಿಲ್ಲ.
ನಮಗೆ ಕೇಳಿಲ್ಲ. ನಮ್ಮನಗೆ ಬಂದಿಲ್ಲ ಎಂದು ಬಹಳ ಜನ ಹೇಳುತ್ತಿದ್ದಾರೆ. ಎಲ್ಲೋ ಒಂದು ಕಡೆ ಇದು ಎಲ್ಲರನ್ನೂ ತಲುಪಿಲ್ಲ ಅನಿಸುತ್ತಿದೆ. ಜಾತಿಗಣತಿ ಎಲ್ಲರ ಗಮನಕ್ಕೂ ಬಂದಿಲ್ಲ. ಹೀಗಾಗಿ ಈ ಗೊಂದಲವನ್ನು ನಿವಾರಣೆ ಮಾಡಿ, ಪ್ರತಿಯೊಬ್ಬರನ್ನು ಭೇಟಿ ಮಾಡಿ ನ್ಯಾಯಯುತವಾಗಿ ಸಮೀಕ್ಷೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಇಂದು ಎಲ್ಲಾ ಸಮಾಜದಲ್ಲೂ ಹಿಂದುಳಿದವರು, ಬಡವರು, ನಿರ್ಗತಿಕರು ಇದ್ದಾರೆ. ಅವರೆಲ್ಲರನ್ನೂ ಅವರವರ ಹಂತದಲ್ಲಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು. ಅವರಿಗೆ ನೌಕರಿ, ಉತ್ತಮ ಶಿಕ್ಷಣ ಒದಗಿಸಿಕೊಡಬೇಕಿದೆ. ಎಲ್ಲವೂ ಆದಾಗ ಎಲ್ಲರೂ ಆರೋಗ್ಯಪೂರ್ಣವಾಗಿ ಸ್ವಸ್ಥ ಸಮಾಜ ಬದುಕು ಕಳೆದಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಅಸಮಾನತೆ ಹೋಗಲಾಡಿಸಬೇಕು. ಸಮಾನತೆಯನ್ನ ತರಬೇಕು. ಹಿಂದುಳಿದವರನ್ನ ಮುಂದೆ ತರಬೇಕು. ಆ ಹಿನ್ನೆಲೆಯಲ್ಲಿ ಜಾತಿಗಣತಿ ಮಾಡಿ ಅದನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ಸಾಬೀತು ಪಡಿಸಬೇಕು ಎಂದಿದ್ದಾರೆ.
10 ವರ್ಷಗಳ ಹಿಂದೆ ಜಾತಿ ಗಣತಿ ಮಾಡಿ ಈಗ ಯಾಕೆ ಪ್ರಕಟ ಮಾಡುತ್ತಿದ್ದಾರೆ ಎಂಬುವುದು ನಮಗೆ ಅರ್ಥವಾಗುತ್ತಿಲ್ಲ. 10 ವರ್ಷಗಳಿಂದ ಇಲ್ಲಿಯವರೆಗೆ ಎಷ್ಟೋ ಬದಲಾವಣೆಗಳು ಆಗಿರುತ್ತವೆ. ಜನಸಂಖ್ಯೆ ಹೆಚ್ಚಿರಬಹುದು. ಏನೇನೋ ಬದಲಾವಣೆಗಳಾಗಿರಬಹುದು. ಹೀಗಾಗಿ ಈಗ ಇದನ್ನು ಪ್ರಕಟಗೊಳಿಸುವುದು ನ್ಯಾಯಯೋಚಿತವಲ್ಲ ಎಂದಿದ್ದಾರೆ.
ವಿವಿಧ ಸಮುದಾಯ ನಾಯಕರ ವಿರೋಧದ ವಿಚಾರವಾಗಿ ಮಾತನಾಡಿದ ಅವರು, ಹಲವರು ನಮ್ಮನ್ನು ಕೇಳಿಲ್ಲ, ನಮಗೆ ಗೊತ್ತಿಲ್ಲ. ನಮ್ಮ ಸಂಖ್ಯೆ ಕಡಿಮೆ ತೋರಿಸಿದ್ದಾರೆ. ಇಲ್ಲಿಯವರೆಗೆ ಡಬಲ್ ಸಂಖ್ಯೆ ಇದ್ದವರನ್ನು ಅರ್ಧಕ್ಕೆ ತಂದು ನಿಲ್ಲಿಸಿದ್ದಾರೆ. ಅರ್ಧ ಇದ್ದವರನ್ನು ಏರೆಕೆ ಮಾಡಿದ್ದಾರೆ. ಹೀಗೆ ಏನೆಲ್ಲ ಸಮಸ್ಯೆಗಳು ಕೇಳಿ ಬರುತ್ತಿವೆ. ಹೀಗಾಗಿ ಇದನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸಮಿಕ್ಷೆ ಮಾಡಲು ಮಠಕ್ಕೆ ಬಂದ್ದರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀ, ಗಣತಿಯ ವಿಚಾರ ನಮಗೆ ಗೊತ್ತೇ ಇಲ್ಲ. ಅವರು ಬಂದಿದ್ದು ನನಗಂತೂ ಗೊತ್ತಿಲ್ಲ. ಯಾರಿಗೂ ಗೊತ್ತಿಲ್ಲ. ನನಗಂತೂ ಯಾರಿಗೂ ಕೇಳಿಲ್ಲ. ಹೀಗಾಗಿ ಸಮಗ್ರವಾಗಿ ಹಳ್ಳಿ ಹಳ್ಳಿ ಸುತ್ತಿ ವರದಿ ಸಿದ್ಧಪಡಿಸುವುದು ಒಳ್ಳೆಯದು ಎಂದಿದ್ದಾರೆ.