ಮೈಸೂರು: ಜಮ್ಮು ಕಾಶ್ಮಿರದ ಪಹಲ್ಗಾಮ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ ಇಡೀ ದೇಶವೇ ಕಿಡಿಕಾರಿದ್ದು, ಕುದಿಯುತ್ತಿದೆ. ಹಲವರು ಪಾಕ್ ವಿರುದ್ಧ ಯುದ್ಧ ಸಾರುವಂತೆ ಮನವಿ ಮಾಡುತ್ತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಯುದ್ಧದ ಬಗ್ಗೆ ಮಾತನಾಡಿದ್ದಾರೆ.
ಪಾಕಿಸ್ತಾನದ (Pakistan) ವಿರುದ್ಧ ಯುದ್ಧದ ಅನಿವಾರ್ಯತೆ ಇಲ್ಲ. ಭಾರತ ಯುದ್ಧದ ಪರವಾಗಿಲ್ಲ ಎದಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಎಂದಿಗೂ ಶಾಂತಿಯ ಪರವಾಗಿದೆ. ಹೀಗಾಗಿ ಭದ್ರತೆ ಕೈಗೊಳ್ಳಬೇಕೇ ವಿನಃ ಯುದ್ಧ ಬೇಡ ಎಂದು ಮನವಿ ಮಾಡಿದ್ದಾರೆ.
ಕಾಶ್ಮೀರದ (Kashmir) ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಭದ್ರತೆ ವಿಷಯದಲ್ಲಿ ಕೇಂದ್ರ ಜನರನ್ನು ನಂಬಿಸಿತ್ತು. ಹೀಗಾಗಿ ಜನರು ಅಲ್ಲಿಗೆ ಪ್ರವಾಸಕ್ಕೆ ಹೋಗಿದ್ದರು. ಆದರೆ, 26 ಜನ ಅಮಾಯಕರು ಸಾವನ್ನಪ್ಪುವಂತಾಯಿತು. ಇದು ಭದ್ರತೆಯ ವೈಫಲ್ಯ ಪ್ರಧಾನಿ ಬರೀ ಭಾಷಣಕಾರ ಎಂದು ಗುಡುಗಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಗೆ ನಾವು ಸಹಕಾರ ಕೊಡುತ್ತೇವೆ. ಪಾಕಿಸ್ತಾನಿಗರನ್ನು ನಮ್ಮ ರಾಜ್ಯದಿಂದ ಹೊರ ಹಾಕುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನ ಪ್ರಜೆಗಳು ಇದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರದ ಸೂಚನೆಯನ್ನ ನಾವು ಪಾಲಿಸುತ್ತೇವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಹೊರ ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.



















