ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಸರ್ವಪತನ ಕಂಡು ಹೀನಾಯ ಹಾಗೂ ಅವಮಾನಕರ ದಾಖಲೆಗೆ ಸಾಕ್ಷಿಯಾಗಿದೆ. ದಿನದಾಟದ ನಂತರ ಹೀನಾಯ ಪ್ರದರ್ಶನದ ಕುರಿತು ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಚ್ ನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಎಡವಿದೆವು. ಪಿಚ್ ಫ್ಲಾಟ್ ಆಗಿದ್ದು ಬ್ಯಾಟ್ಸ್ ಮನ್ ಗಳಿಗೆ ಸಹಾಯ ಮಾಡುತ್ತದೆ ಎಂದು ಭಾವಿಸಿದ್ದೆ. ಇದು ನಮ್ಮ ವೈಫಲ್ಯಕ್ಕೆ ಕಾರಣವಾಯಿತು.
ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಲಾಗಿತ್ತು. ವಾಸ್ತವವಾಗಿ ಕೊಹ್ಲಿ ಟೆಸ್ಟ್ನಲ್ಲಿ 4ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿಯುತ್ತಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶೂನ್ಯಕ್ಕೆ ಔಟಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ವಿರಾಟ್ ಕೊಹ್ಲಿ ಅವರೇ ಈ ನಿರ್ಧಾರ ತೆಗೆದುಕೊಂಡಿದ್ದರಿಂದ ಅವರ ಬ್ಯಾಟಿಂಗ್ ಕ್ರಮಾಂಕ ಬದಲಿಸಲಾಯಿತು ಎಂದಿದ್ದಾರೆ.
ಪಂತ್ ಅವರ ಕಾಲಿಗೆ ಚೆಂಡು ಬಡಿದು ಮೈದಾನದಿಂದ ಹೊರಹೊಗಿದ್ದರು. ಈ ಬಗ್ಗೆ ಮಾಹಿತಿ ನೀಡಿದ ರೋಹಿತ್, ಪಂತ್ ಶಸ್ತ್ರಚಿಕಿತ್ಸೆಗೆ ಒಳಗಾದ ಅದೇ ಕಾಲಿಗೆ ಚೆಂಡು ಬಡಿದಿದೆ. ಹೀಗಾಗಿ ಪಂತ್ ಅವರ ಕಾಲು ಊದಿಕೊಂಡಿತು. ಹೀಗಾಗಿ ಹೊರ ನಡೆದರು ಎಂದಿದ್ದಾರೆ. ಭಾರತದ ಬ್ಯಾಟ್ಸ್ಮನ್ಗಳ ಶಾಟ್ ಆಯ್ಕೆ ಸರಿ ಇರಲಿಲ್ಲ. ಇದು ತಂಡಕ್ಕೆ ಕೆಟ್ಟ ದಿನವಾಗಿತ್ತು. ಕೆಲವೊಮ್ಮೆ ನಾವು ಅಂದುಕೊಂಡಿದ್ದರ ವಿರುದ್ಧ ನಡೆಯುತ್ತದೆ ಎಂದು ರೋಹಿತ್ ಹೇಳಿದ್ದಾರೆ.