ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸುವುದಕ್ಕೂ ಮುನ್ನ ಆರ್ಸಿಬಿ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದು, ಕೆಲವು ವಿಡಿಯೋಗಳಲ್ಲಿ ಜಗಜ್ಜಾಹೀರಾಗಿದೆ. ವಿಧಾನಸೌಧದಿಂದ ಸ್ಟೇಡಿಯಂನತ್ತ ಆಟಗಾರರು ಹೆಜ್ಜೆ ಹಾಕುತ್ತಿದ್ದಾಗ ವಾಹನ ತಡೆದು ರೋಡ್ನಲ್ಲೇ ಸ್ಟೆಪ್ ಹಾಕಿದ್ದು, ದೃಶ್ಯಗಳಲ್ಲಿ ಗೋಚರಿಸಿದೆ. ವಿಧಾನಸೌಧ ಮುಂಭಾಗ ಸನ್ಮಾನ ಸಮಾರಂಭ ನೋಡಲು ಕೆಲವು ಫ್ಯಾನ್ಸ್ ಮರ ಏರಿ ಕುಳಿತಿದ್ದು ಕೂಡ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಅಭಿಮಾನಿಗಳ ಹುಚ್ಚಾಟ, ರಂಪ-ರಾಮಾಯಣಕ್ಕೆ ಸಾವು-ನೋವಿನ ಜತೆ ಗಿಡ-ಮರಗಳಿಗೂ ಹಾನಿ ಆಗಿದೆ. ಜನರ ಕಾಲ್ತುಳಿತದಿಂದ ಮೊಣಕಾಲುದ್ದ ಬೆಳೆದಿದ್ದ ಗಿಡಗಳು ನೆಲ ಸಮವಾಗಿವೆ. ಕಬ್ಬನ್ ಪಾರ್ಕ್ ನ ಲಕ್ಷಗಟ್ಟಲೆ ಗಿಡ, ಮರಗಳಿಗೂ ಹಾನಿಯಾಗಿದೆ. ಹೀಗಾಗಿ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಸದಸ್ಯರು ಕಮಿಷನರ್ ಗೆ ದೂರು ನೀಡಿದ್ದಾರೆ.

ಬುಧವಾರ ನಡೆದ ಸನ್ಮಾನ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಲಕ್ಷ-ಲಕ್ಷಗಟ್ಟಲೆ ಅಭಿಮಾನಿಗಳು ಜಮಾಯಿಸಿದ್ದರು. ವಿಧಾನಸೌಧ, ಹೈಕೋರ್ಟ್ ಮುಂಭಾಗ ಇದ್ದ ಬ್ಯಾರಿಕೇಡ್ ಗಳು, ನೆಲಮಟ್ಟದ ಗಿಡ, ಆರ್ನಮೆಂಟಲ್ ಪ್ಲಾಂಟ್ಸ್ ಗಳು ಜನರ ತುಳಿತಕ್ಕೆ ಅಪ್ಪಚ್ಚಿಯಾಗಿವೆ. ಇದರಿಂದ ವಿಧಾನಸೌಧ ಮುಂದಿದ್ದ ಪುಟಾಣಿ ಗಿಡಗಳ ಟೊಂಗೆಗಳೆಲ್ಲಾ ಮುರಿದು, ಮುದುರಿ ಒಣಗಿ ಸರ್ವನಾಶವಾಗಿವೆ. ಗಿಡ-ಮರಗಳ ಸ್ಥಿತಿ ಕಂಡ ಪಾರ್ಕ್ ವಾಕರ್ಸ್ ಅಸೋಷಿಯೇಷನ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದೆ.