ನವ ದೆಹಲಿ : ಆರೋಪಿಗಳಿಗೆ ನ್ಯಾಯಸಮ್ಮತ ವಿಚಾರಣೆ ಹಾಗೂ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕಿನ ಬಗ್ಗೆ ದಶಕಗಳ ಕಾಲ ಗಮನ ಹರಿಸಿದ್ದ ಭಾರತದ ನ್ಯಾಯವ್ಯವಸ್ಥೆ ಅಪರಾಧ ಕಾನೂನುಗಳ ಮರು ವಿಶ್ಲೇಷಣೆ ನಡೆಸಿ, ಆರೋಪಿಗಳನ್ನು ಖುಲಾಸೆಗೊಳಿಸಿದ ಸಂದರ್ಭದಲ್ಲಿ ಸಂತ್ರಸ್ತರು ಹಾಗೂ ಅವರ ಕುಟುಂಬದವರು ಕೂಡಾ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ.
ಇದುವರೆಗೆ ವಿಚಾರಣಾ ನ್ಯಾಯಾಲಯ ಅಥವಾ ಹೈಕೋರ್ಟ್ ನಲ್ಲಿ ಆರೋಪಿಗಳ ದೋಷಮುಕ್ತಿಯಾದಲ್ಲಿ ಸರ್ಕಾರ ಅಥವಾ ದೂರುದಾರರು ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತು. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಕೆ.ವಿ.ವಿಶ್ವನಾಥ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ ದ್ವಿಸದಸ್ಯ ನ್ಯಾಯಪೀಠ ಈ ಹಕ್ಕನ್ನು ಅಪರಾಧ ಸಂತ್ರಸ್ತರಿಗೆ ಮತ್ತು ಅವರ ಉತ್ತರಾಧಿಕಾರಿಗಳಿಗೂ ವಿಸ್ತರಣೆ ಮಾಡಿ ಆದೇಶಿಸಿದೆ.
ಈ ಹೊಸ ಅವಕಾಶಕ್ಕೆ ನಾಂದಿ ಹಾಡಲು ಅನುವು ಮಾಡಿಕೊಡುವ 58 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿ ನಾಗರತ್ನ “ಭಾರತದ ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 375ರ ಅಡಿಯಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ನೀಡಿರುವ ಅಪರಾಧಿಗಳ ಹಕ್ಕಿಗೆ ಸರಿಸಮಾನವಾಗಿ ಸಂತ್ರಸ್ತರ ಹಕ್ಕನ್ನೂ ನೋಡುವುದು ಅತ್ಯಗತ್ಯ” ಎಂದು ಸ್ಪಷ್ಟಪಡಿಸಿದ್ದಾರೆ.
“ಅಪರಾಧ ಪ್ರಕ್ರಿಯೆ ಸಂಹಿತೆ ಸೆಕ್ಷನ್ 372ರ ಅನ್ವಯ ಕಡಿಮೆ ಅಪರಾಧಗಳಿಗೆ ಶಿಕ್ಷೆಯಾದಲ್ಲಿ ಅಥವಾ ಕಡಿಮೆ ಪರಿಹಾರ ನೀಡುವಂತೆ ತೀರ್ಪು ನೀಡಿದಲ್ಲಿ ಅಥವಾ ಖುಲಾಸೆ ಮಾಡಿದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕು ಎಲ್ಲ ಸಂತ್ರಸ್ತರಿಗೆ ಇದೆ” ಎಂದು ವಿವರಿಸಿದ್ದಾರೆ.



















