ಜೌನ್ಪುರ (ಉತ್ತರ ಪ್ರದೇಶ): ಅಂತರ್ ಧರ್ಮೀಯ ವಿವಾಹಕ್ಕೆ ಸಂಬಂಧಿಸಿ ಉಂಟಾದ ಕೌಟುಂಬಿಕ ಕಲಹ ಮತ್ತು ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಎಂಜಿನಿಯರ್ ಒಬ್ಬ ತನ್ನ ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದು, ಮೃತದೇಹಗಳನ್ನು ತುಂಡರಿಸಿ, ಅವುಗಳನ್ನು ನದಿಗೆ ಎಸೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಅಂಬೇಶ್ ಎಂದು ಗುರುತಿಸಲಾಗಿದೆ. ಈತ ತನ್ನ ತಂದೆ ಶ್ಯಾಮ್ ಬಹದ್ದೂರ್ (62) ಮತ್ತು ತಾಯಿ ಬಬಿತಾ (60) ಅವರನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?
ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದ ಶ್ಯಾಮ್ ಬಹದ್ದೂರ್ ಮತ್ತು ಬಬಿತಾ ದಂಪತಿಗೆ ಮೂವರು ಪುತ್ರಿಯರು ಮತ್ತು ಅಂಬೇಶ್ ಒಬ್ಬನೇ ಮಗ. ಅಂಬೇಶ್ ಕಳೆದ ಐದು ವರ್ಷಗಳ ಹಿಂದೆ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದ. ಆದರೆ, ಈ ಅಂತರ್ ಧರ್ಮೀಯ ವಿವಾಹವನ್ನು ಆತನ ಪೋಷಕರು ವಿರೋಧಿಸಿದ್ದರು ಮತ್ತು ಸೊಸೆಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರೂ, ಪೋಷಕರ ವಿರೋಧದಿಂದಾಗಿ ಅಂಬೇಶ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ.
ಪೋಷಕರ ನಿರಂತರ ಒತ್ತಾಯಕ್ಕೆ ಮಣಿದ ಅಂಬೇಶ್, ಅಂತಿಮವಾಗಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದ. ವಿಚ್ಛೇದನದ ಪರಿಹಾರವಾಗಿ (ಜೀವನಾಂಶ) ಪತ್ನಿಗೆ 5 ಲಕ್ಷ ರೂಪಾಯಿ ನೀಡಬೇಕಾಗಿತ್ತು. ಈ ಹಣಕ್ಕಾಗಿ ಅಂಬೇಶ್ ತನ್ನ ತಂದೆಯನ್ನು ಕೇಳಿದ್ದ. ಡಿಸೆಂಬರ್ 8ರಂದು ಈ ವಿಚಾರವಾಗಿ ತಂದೆ-ಮಗನ ನಡುವೆ ಭಾರೀ ಜಗಳ ನಡೆದಿದೆ. ಹಣ ನೀಡಲು ತಂದೆ ನಿರಾಕರಿಸಿದಾಗ ಕೋಪಗೊಂಡ ಅಂಬೇಶ್ ಈ ಕೃತ್ಯ ಎಸಗಿದ್ದಾನೆ.
ಹತ್ಯೆ ಮತ್ತು ಸಾಕ್ಷ್ಯ ನಾಶದ ಯತ್ನ
ಜಗಳ ವಿಪರೀತಕ್ಕೆ ಹೋದ ಸಮಯದಲ್ಲಿ ಅಂಬೇಶ್ ಮೊದಲಿಗೆ ತನ್ನ ತಾಯಿ ಬಬಿತಾ ಅವರ ತಲೆಗೆ ಬೀಸುವ ಕಲ್ಲಿನಿಂದ ಹೊಡೆದಿದ್ದಾನೆ. ಇದನ್ನು ತಡೆಯಲು ಮತ್ತು ಸಹಾಯಕ್ಕಾಗಿ ಕೂಗಿಕೊಳ್ಳಲು ಮುಂದಾದ ತಂದೆ ಶ್ಯಾಮ್ ಬಹದ್ದೂರ್ ಅವರ ಮೇಲೂ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ನಂತರ ಸಾಕ್ಷ್ಯ ನಾಶಪಡಿಸಲು ಮುಂದಾದ ಅಂಬೇಶ್, ಮೃತದೇಹಗಳನ್ನು ವಿಲೇವಾರಿ ಮಾಡಲು ಗ್ಯಾರೇಜ್ನಲ್ಲಿದ್ದ ಗರಗಸವನ್ನು ಬಳಸಿದ್ದಾನೆ. ತಂದೆ-ತಾಯಿಯ ಮೃತದೇಹಗಳನ್ನು ಆರು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಿ ತನ್ನ ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಹೋಗಿ ದೂರದ ನದಿಗೆ ಎಸೆದು ವಾಪಸಾಗಿದ್ದಾನೆ.
ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ಘಟನೆಯ ನಂತರ ಅಂಬೇಶ್ ತನ್ನ ಸಹೋದರಿ ವಂದನಾ ಅವರಿಗೆ ಕರೆ ಮಾಡಿ, “ತಂದೆ-ತಾಯಿ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ, ನಾನು ಅವರನ್ನು ಹುಡುಕಲು ಹೋಗುತ್ತಿದ್ದೇನೆ” ಎಂದು ಸುಳ್ಳು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಡಿಸೆಂಬರ್ 13ರಂದು ವಂದನಾ ಅವರು ಜಫರಾಬಾದ್ ಪೊಲೀಸ್ ಠಾಣೆಯಲ್ಲಿ ಅಪ್ಪ-ಅಮ್ಮ ನಾಪತ್ತೆಯಾಗಿದ್ದಾರೆಂದು ದೂರು ದಾಖಲಿಸಿದ್ದರು.
ಸುಮಾರು ಒಂದು ವಾರದ ನಂತರ ಅಂಬೇಶ್ ಮನೆಗೆ ಮರಳಿದಾಗ, ಸಂಬಂಧಿಕರು ಪೋಷಕರ ಬಗ್ಗೆ ಪ್ರಶ್ನಿಸಿದ್ದಾರೆ. ಆತ ಅಸ್ಪಷ್ಟ ಉತ್ತರಗಳನ್ನು ನೀಡಿದಾಗ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಸದ್ಯ ಪೊಲೀಸರು ಶ್ಯಾಮ್ ಬಹದ್ದೂರ್ ಅವರ ದೇಹದ ಒಂದು ಭಾಗವನ್ನು ಹಾಗೂ ಹತ್ಯೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ನದಿಯಲ್ಲಿ ಎಸೆಯಲಾದ ಉಳಿದ ದೇಹದ ಭಾಗಗಳಿಗಾಗಿ ಮುಳುಗು ತಜ್ಞರ ಸಹಾಯದಿಂದ ಶೋಧ ಕಾರ್ಯ ಮುಂದುವರೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ಶ್ರೀವಾಸ್ತವ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ಷತಾ ಪೂಜಾರಿ ಹಲ್ಲೆ ಕೇಸ್ | ಮೂವರು ಪೊಲೀಸರು ಸೇರಿ ಐವರ ಮೇಲೆ FIR



















