ನವದೆಹಲಿ: ದೇಶದಲ್ಲಿ 1961ರ ಆದಾಯ ತೆರಿಗೆ ಕಾಯ್ದೆ ಬದಲಾಗಿ, ಹೊಸ ಆದಾಯ ತೆರಿಗೆ ಕಾಯ್ದೆ-2025 ಇದೇ ವರ್ಷದ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದರಿಂದ ತೆರಿಗೆದಾರರಿಗೆ (Union Budget 2026) ಅನುಕೂಲವಾಗಲಿದೆ. ತೆರಿಗೆದಾರರು ಸುಲಭವಾಗಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಬಹುದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದ ವೇಳೆ ತಿಳಿಸಿದರು. ಇದರೊಂದಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಐಟಿಆರ್ 1, ಐಟಿಆರ್ 2 ಸಲ್ಲಿಸುವವರಿಗೆ ಜುಲೈ 31ರವರೆಗೆ ಅವಕಾಶ ನೀಡಲಾಗಿದೆ. ಯುವ ವೃತ್ತಿಪರರು, ಟೆಕ್ಕಿಗಳಿಗೆ ಹೂಡಿಕೆ ಘೋಷಣೆ ಮಾಡಲು 6 ತಿಂಗಳು ಅವಕಾಶ ನೀಡಲಾಗಿದೆ. ವಿದೇಶಿ ಆಸ್ತಿ ಘೋಷಣೆಗೂ ಆರು ತಿಂಗಳು ಅವಕಾಶ ನೀಡಲಾಗಿದೆ. ವಿದೇಶ ಪ್ರವಾಸಕ್ಕೆ ತೆರಳುವವರಿಗೆ ಇದ್ದ ಟಿಡಿಎಸ್ ಮೊತ್ತವು ಶೇ.5ರಿಂದ ಶೇ.2ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಅನ್ನು ಶೂನ್ಯಕ್ಕೆ ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೋಟಾರ್ ಅಪಘಾತ ಕ್ಲೇಮ್ ಗಳಿಗೆ ಯಾವುದೇ ತೆರಿಗೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಟಿಸಿಎಸ್ ಅನ್ನು ಶೇ.2ರಷ್ಟು ಕಡಿತಗೊಳಿಸಲಾಗಿದೆ. ಸಣ್ಣ ತೆರಿಗೆ ಅಪರಾಧಗಳಿಗೆ ಶಿಕ್ಷೆಯ ಬದಲಿಗೆ ದಂಡವನ್ನು ಮಾತ್ರ ವಿಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಆದಾಯ ತೆರಿಗೆ ಬಾಕಿ ಉಳಿಸಿಕೊಳ್ಳುವವರಿಗೆ ಶಾಕ್
ಆದಾಯ ತೆರಿಗೆ ವಿನಾಯಿತಿ ಮೊತ್ತವನ್ನು 12 ಲಕ್ಷ ರೂಪಾಯಿಗೆ ಏರಿಸಿರುವ ಕೇಂದ್ರ ಸರ್ಕಾರವು, ತೆರಿಗೆ ಬಾಕಿ ಉಳಿಸಿಕೊಳ್ಳುವವರಿಗೆ ಶಾಕ್ ನೀಡಿದೆ. ಆದಾಯ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇ.100ರಷ್ಟು ದಂಡ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದೇಶದ 7 ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ | ಬೆಂಗಳೂರಿಗೆ ಡಬಲ್ ಖುಷಿ



















