ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಬಡಾವಣೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿವೆ. ಸಾಯಿ ಲೇಔಟ್ ಈ ಬಾರಿಯೂ ನೀರಿನಲ್ಲಿ ಮುಳುಗಿ ಹೋಗಿದೆ. ವಡ್ಡರ ಪಾಳ್ಯ ಮುಖ್ಯ ರಸ್ತೆ, ಕಾವೇರಿ ನಗರ ಜಲಾವೃತಗೊಂಡಿದೆ.
ಈ ವರ್ಷವೂ ಈ ಭಾಗದ ಜನ ಜಲಪ್ರವಾಹಕ್ಕೆ ಸಿಲುಕಿದ್ದಾರೆ. ಇಲ್ಲಿನ ಜನರು ಇಡೀ ದಿನ ನೀರು ಖಾಲಿ ಮಾಡಲು ಸರ್ಕಸ್ ನಡೆಸಿದ್ದಾರೆ. ವಿಪತ್ತು ನಿರ್ವಹಣಾ ಪಡೆ ಕೂಡ ನೀರು ಹೊರಗೆ ಹಾಕುವ ಯತ್ನ ಮಾಡುತ್ತಿದ್ದಾರೆ. ಆದರೆ, ಇಂದು ಮಳೆ ಮುಂದುವರಿದರೆ ಮತ್ತೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಶಾಶ್ವತ ಪರಿಹಾರಕ್ಕೆ ಜನರು ಮನವಿ ಮಾಡುತ್ತಿದ್ದಾರೆ. ಮತ್ತೆ ಮಳೆ ಬರುವ ಸೂಚನೆ ಇರುವ ಹಿನ್ನೆಲೆಯಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆತಂಕದಲ್ಲೇ ಜನರು ಬದುಕು ಕಳೆಯುವಂತಾಗುತ್ತಿದೆ.
ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣಾ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಬೋಟ್ ಗಳ ಸಹಿತ ಸ್ಥಳದಲ್ಲೇ ಬೀಡು ಬಿಟ್ಟು ನೀರು ಹೊರ ಹಾಕಲು ಯತ್ನಿಸುತ್ತಿದ್ದಾರೆ.
ರಸ್ತೆಗಳಲ್ಲಿ ರಾಜಕಾಲುವೆ ನೀರು ಹರಿಯುತ್ತಿದೆ. ಚರಂಡಿಗೆ ನೀರು ಹರಿಯಲು ದಾರಿ ಮಾಡಲು ತಂಡಗಳು ಹರಸಾಹಸ ಪಡುತ್ತಿದ್ದಾರೆ. ಜನರಿಗೆ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಆಹಾರ, ನೀರು ಒದಗಿಸಲಾಗುತ್ತಿದೆ. ಲೇ ಔಟ್ ನಿವಾಸಿಗಳಿಗೆ ಪಾಲಿಕೆಯಿಂದಲೇ ತಿಂಡಿ, ನೀರು ವಿತರಣೆ ಮಾಡಲಾಗುತ್ತಿದೆ.