ನವದೆಹಲಿ: ರೂಮ್ ಬಾಡಿಗೆ ಕಟ್ಟಲು ಆಗದಿದ್ದಕ್ಕೆ ಭಾರತೀಯ ಆಡಳಿತ ಸೇವೆ(IAS) ಆಕಾಂಕ್ಷಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ನವದೆಹಲಿಯ ರಾಜೇಂದ್ರ ನಗರದಲ್ಲಿ ನಡೆದಿದೆ. ಅಂಜಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಮಹಾರಾಷ್ಟ್ರದ ಅಕೋಲಾ ನಗರದ ನಿವಾಸಿ ಎನ್ನಲಾಗಿದೆ. ಐಎಎಸ್ ತಯಾರಿಗಾಗಿ ದೆಹಲಿಯಲ್ಲಿ ವಾಸಿಸುತ್ತಿದ್ದರು. ಆದರೆ, ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಹಣ ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಂಜಲಿ ಕಳೆದ ಕೆಲವು ವರ್ಷಗಳಿಂದ ಐಎಎಸ್ ಪರೀಕ್ಷೆ ತಯಾರಿಗಾಗಿ ರಾಜೇಂದ್ರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಖಿನ್ನತೆ ಹಾಗೂ ಹಿಂಜರಿಕೆಯಿಂದಾಗಿ ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಂಜಲಿ ಬರೆದ ಡೆತ್ ನೋಟ್ ಪತ್ತೆಯಾಗಿದ್ದು, ಅಪ್ಪ, ಅಮ್ಮ ಕ್ಷಮಿಸಿ. ನೀವು ನನ್ನನ್ನು ಚೆನ್ನಾಗಿಯೇ ಬೆಳೆಸಿದ್ದೀರಿ. ಆದರೆ, ಈಗ ಜೀವನದಲ್ಲಿ ನಿಜವಾಗಿಯೂ ಬೇಸರಗೊಂಡಿದ್ದೇನೆ. ಸಮಸ್ಯೆಗಳೇ ಹೆಚ್ಚಾಗಿವೆ. ನನಗೆ ಶಾಂತಿ ಬೇಕು. ನನ್ನ ಖಿನ್ನತೆ ಶಮನಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ, ಅದು ಸಾಧ್ಯವಾಗಲಿಲ್ಲ. ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್ ಮಾಡಬೇಕಿತ್ತು. ಅದು ಆಗಲಿಲ್ಲ. ಪಿಜಿ ಮತ್ತು ಹಾಸ್ಟೆಲ್ ರೆಂಟ್ ಕೂಡ ಜಾಸ್ತಿ ಮಾಡಿ ವಿದ್ಯಾರ್ಥಿಗಳಿಂದ ಎಲ್ಲರೂ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಅಂಜಲಿ ಪ್ರತಿ ತಿಂಗಳು 15 ಸಾವಿರ ರೂ.ಗಳನ್ನು ಬಾಡಿಗೆಯಾಗಿ ಕಟ್ಟುತ್ತಿದ್ದರು ಎನ್ನಲಾಗಿದೆ. ಆದರೆ, ಏಕಾಏಕಿ ಮನೆಯ ಮಾಲೀಕರು 3 ಸಾವಿರ ರೂ.ಗಳನ್ನು ಏರಿಕೆ ಮಾಡಿದ್ದರಿಂದ 18 ಸಾವಿರ ಕಟ್ಟಬೇಕಾಗಿತ್ತು. ಹೀಗಾಗಿ ಕೂಡ ಮನನೊಂದಿದ್ದಳು ಎಂದು ಅಂಜಲಿ ಸ್ನೇಹಿತೆ ಹೇಳಿದ್ದಾರೆ. ಈ ಕುರಿತು ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.