ಬೆಳಗಾವಿ : ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮೂರು ಎಕರೆ ಜಾಗದ ವಿಚಾರಕ್ಕೆ ಸಂಬಂಧಿಸಿದ ವೈಷಮ್ಯವೇ ಹತ್ಯೆಗೆ ಕಾರಣವೆಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಫೆಬ್ರವರಿ 20ರಂದು ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಹೊರವಲಯದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಪ್ರಕರಣವನ್ನು ಭೇದಿಸಿದ ಕಿತ್ತೂರು ಪೊಲೀಸ್ ಠಾಣೆ ಪೊಲೀಸರು ಮೃತ ವ್ಯಕ್ತಿ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಕೋಟಿ ಎಂದು ಗುರುತಿಸಿದ್ದಾರೆ.
ಕಲ್ಮೇಶ ತುಮಕೂರಿನ ಮಠವೊಂದರಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಶಿವರಾತ್ರಿಗೆಂದು ಊರಿಗೆ ಬಂದಿದ್ದರು. ಈ ವೇಳೆ ಮೂರು ಎಕರೆ ಜಮೀನು ವಿಚಾರವಾಗಿ ಸಂಚು ರೂಪಿಸಿ ಹತ್ಯೆಗೈಯಲಾಗಿದೆ ಎಂದು ತಿಳಿದುಬಂದಿದೆ.
‘ಪಾರ್ಟಿ ಮಾಡಿ ಬರೋಣ’ ಎಂದು ಹೇಳಿ ಜಮೀನಿಗೆ ಕರೆದೊಯ್ದು ಉಸಿರುಗಟ್ಟಿಸಿ ಕಲ್ಮೇಶನನ್ನು ಕೊಲೆ ಮಾಡಲಾಗಿದೆ. ಕೊಲೆ ಬಳಿಕ ಆರೋಪಿಯೊಬ್ಬ ಅಕ್ಕನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಕಲ್ಮೇಶನ ಬಾಮೈದ ಮಲ್ಲೇಶ ಅಂಬಣ್ಣವರ (32), ಮಲ್ಲೇಶನ ಸ್ನೇಹಿತ ಮುದುಕಪ್ಪ ಕೋಲೇಕರ್, ಮೃತನ ಪತ್ನಿ ಕಸ್ತೂರಿ ಕೋಟಿ ಹಾಗೂ ಪುತ್ರ ಕಿರಣ್ ಕೋಟಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರನ್ನು ಬಂಧಿಸಿ ಹಿಂಡಲಗಾ ಜೈಲುಗೆ ರವಾನಿಸಲಾಗಿದೆ. ಮೃತನ ಪತ್ನಿ ಮತ್ತು ಪುತ್ರನೂ ಸಂಚಿನಲ್ಲಿ ಭಾಗಿಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ನೀಡಿದೆ.
ಇದನ್ನೂ ಓದಿ : ಕೋಲಾರ | ಬೈಕ್ಗೆ ಬೊಲೆರೊ ವಾಹನ ಡಿಕ್ಕಿ : ಪೊಲೀಸ್ ಪೇದೆ ಸಾವು



















