ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಮತ್ತು ನಟ-ನಿರ್ದೇಶಕ ಆರ್. ಪಾರ್ಥಿಬನ್ ನಡುವೆ ಈಗ ವಾಕ್ಸಮರ ತೀವ್ರಗೊಂಡಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾರ್ಥಿಬನ್ ಅವರು ತ್ರಿಷಾ ಕುರಿತು ನೀಡಿದ್ದ ಪರೋಕ್ಷ ವ್ಯಂಗ್ಯದ ಹೇಳಿಕೆಗೆ ನಟಿ ತ್ರಿಷಾ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಮೈಕ್ರೋಫೋನ್ ಸಿಕ್ಕ ತಕ್ಷಣ ಆಡುವ ಮಾತುಗಳು ಬುದ್ಧಿವಂತಿಕೆಯಿಂದ ಕೂಡಿರುತ್ತವೆ ಎಂದರ್ಥವಲ್ಲ, ಅವು ದಡ್ಡತನವನ್ನು ಹೆಚ್ಚು ಜೋರಾಗಿ ಕೇಳಿಸುವಂತೆ ಮಾಡುತ್ತವೆ ಅಷ್ಟೇ” ಎಂದು ಹೇಳುವ ಮೂಲಕ ತ್ರಿಷಾ ಅವರು ಪಾರ್ಥಿಬನ್ ಕಾಲೆಳೆದಿದ್ದಾರೆ.
ವಿವಾದದ ಕಿಡಿ ಹಚ್ಚಿದ ಪಾರ್ಥಿಬನ್ ಹೇಳಿಕೆ
ಇತ್ತೀಚೆಗೆ ನಡೆದ ‘ಗಲಾಟಾ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಪಾರ್ಥಿಬನ್ ಅವರಿಗೆ ನಟಿ ತ್ರಿಷಾ ಅವರ ಫೋಟೋ ತೋರಿಸಿ ಅಭಿಪ್ರಾಯ ಕೇಳಲಾಗಿತ್ತು. ಈ ವೇಳೆ ತ್ರಿಷಾ ಅವರ ಹೆಸರನ್ನು ನೇರವಾಗಿ ಹೇಳದ ಪಾರ್ಥಿಬನ್, ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಅವರ ಪಾತ್ರವನ್ನು ಉಲ್ಲೇಖಿಸಿ, “ಈ ಕುಂದವೈ ಕೆಲವು ದಿನಗಳ ಕಾಲ ಮನೆಯಲ್ಲೇ ಇರುವುದು ಒಳ್ಳೆಯದು. ಆಕೆಯನ್ನು ಹೊರಗೆ ಬರಲು ಬಿಡಬೇಡಿ” ಎಂದು ಹಾಸ್ಯದ ರೂಪದಲ್ಲಿ ವ್ಯಂಗ್ಯವಾಡಿದ್ದರು. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ತ್ರಿಷಾ ಖಡಕ್ ಪ್ರತಿಕ್ರಿಯೆ
ಪಾರ್ಥಿಬನ್ ಅವರ ಈ ಮಾತಿಗೆ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿರುವ ತ್ರಿಷಾ, “ಯಾವುದೇ ಜ್ಞಾನವಿಲ್ಲದೆ ಆಡುವ ಅಸಭ್ಯ ಮಾತುಗಳು ಆ ವ್ಯಕ್ತಿಯ ಗುಣವನ್ನು ಎತ್ತಿ ತೋರಿಸುತ್ತವೆಯೇ ಹೊರತು, ಯಾರನ್ನು ಉದ್ದೇಶಿಸಿ ಆಡಲಾಗಿದೆಯೋ ಅವರನ್ನಲ್ಲ. ಮೈಕ್ರೋಫೋನ್ ಹಿಡಿದ ತಕ್ಷಣ ಆಡುವ ಮಾತುಗಳು ಹಾಸ್ಯಮಯವಾಗಿ ಅಥವಾ ಬುದ್ಧಿವಂತಿಕೆಯಿಂದ ಕೂಡಿರುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡುವವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ವಿಜಯ್ ಜೊತೆಗಿನ ವಿವಾದ
ಈ ವಿವಾದದ ಹಿಂದೆ ನಟ ವಿಜಯ್ ಮತ್ತು ತ್ರಿಷಾ ಅವರ ಸ್ನೇಹದ ಕುರಿತಾದ ಚರ್ಚೆಗಳೂ ಇವೆ ಎನ್ನಲಾಗಿದೆ. ಮಾರ್ಚ್ 5 ರಂದು ಚೆನ್ನೈನಲ್ಲಿ ನಡೆದ ಮದುವೆಯೊಂದಕ್ಕೆ ವಿಜಯ್ ಮತ್ತು ತ್ರಿಷಾ ಒಂದೇ ಕಾರಿನಲ್ಲಿ ಆಗಮಿಸಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ನಟ ವಿಜಯ್ ಅವರ ಪತ್ನಿ ಸಂಗೀತಾ ಅವರೊಂದಿಗೆ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ ಈ ಇಬ್ಬರು ತಾರೆಯರು ಜೊತೆಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಅಲ್ಲದೇ, ವಿಜಯ್ ಪತ್ನಿ ಸಂಗೀತಾ ಅವರೂ, ತಮ್ಮ ಪತಿಗೆ ಸಹನಟಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದರು. ಇದೇ ವಿಷಯವನ್ನು ಇಟ್ಟುಕೊಂಡು ಪಾರ್ಥಿಬನ್ ಅವರು ‘ಮನೆಯಲ್ಲೇ ಇರಿ’ ಎಂಬ ಅರ್ಥದಲ್ಲಿ ತ್ರಿಷಾ ವಿರುದ್ಧ ಕಾಮೆಂಟ್ ಮಾಡಿದ್ದರು ಎನ್ನಲಾಗಿದೆ.
ಕ್ಷಮೆ ಯಾಚಿಸಿದ ಪಾರ್ಥಿಬನ್
ತ್ರಿಷಾ ಅವರ ತೀವ್ರ ಆಕ್ರೋಶದ ನಂತರ ನಟ ಪಾರ್ಥಿಬನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. “ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ, ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಪಂಚ ಪಾಲಿಕೆಗಳ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ ಜಿಬಿಎ



















