ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ(TTD) ಲಡ್ಡು ಪ್ರಸಾದದಲ್ಲಿ ಬಳಸಲಾದ ತುಪ್ಪದ ಕಲಬೆರಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಈಗ ವೈಎಸ್ಆರ್ ಕಾಂಗ್ರೆಸ್ ಪಕ್ಷದ(YSRCP) ಆಡಳಿತದ ಸಮಯದಲ್ಲಿ ಸೇವೆ ಸಲ್ಲಿಸಿದ ಟಿಟಿಡಿಯ ಮಾಜಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಎಸ್ಐಟಿ ಅಧಿಕಾರಿಗಳು ಸೋಮವಾರ ಟಿಟಿಡಿ ಮಾಜಿ ಅಧ್ಯಕ್ಷರಾದ ವೈ.ವಿ. ಸುಬ್ಬಾ ರೆಡ್ಡಿ, ಧರ್ಮ ರೆಡ್ಡಿ, ಇತರೆ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಮಾಜಿ ಟಿಟಿಡಿ ಇಒ ಅನಿಲ್ ಕುಮಾರ್ ಸಿಂಘಾಲ್ (ಡಿಯೋ) ಅವರಿಗೆ ಮೊದಲ ಸುತ್ತಿನ ನೋಟಿಸ್ ಜಾರಿಗೊಳಿಸಿದ್ದಾರೆ. ಸದ್ಯದಲ್ಲೇ ಇವರನ್ನು ತನಿಖೆಗೆ ಬರುವಂತೆ ಸೂಚಿಸುವ ಸಾಧ್ಯತೆಯಿದೆ.
ತಿರುಪತಿ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪದ ಪೂರೈಕೆಯ ಆರೋಪದ ಬಗ್ಗೆ ನಡೆಯುತ್ತಿರುವ ಗಂಭೀರ ತನಿಖೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. 2 ದಿನಗಳ ಹಿಂದಷ್ಟೇ ಸಿಬಿಐ ನೇತೃತ್ವದ ಎಸ್ಐಟಿ, ಪ್ರಕರಣದ ಕೇಂದ್ರಬಿಂದುವಾಗಿರುವ ಮೂರು ಡೈರಿಗಳ ನಿರ್ದೇಶಕರ ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಕೋರ್ಟ್ನ ಮುಂದೆ ತನ್ನ ವಾದವನ್ನು ಮಂಡಿಸಿದ ಸಿಬಿಐ, ಈ ಪ್ರಕರಣವನ್ನು “ವಿಶ್ವಾಸ ದ್ರೋಹ” ಎಂದು ಬಣ್ಣಿಸಿದೆ. ಇದು ಕೇವಲ ಆಹಾರದಲ್ಲಿ ಮಾಡಲಾದ ವಂಚನೆಯಲ್ಲ, ಬದಲಿಗೆ ದೇಶಾದ್ಯಂತ ಕೋಟ್ಯಂತರ ಭಕ್ತರನ್ನು ವಂಚಿಸುವ ಬಹು-ಕೋಟಿ ಒಳಸಂಚು ಎಂದು ಕರೆದಿದೆ.
ತನಿಖಾಧಿಕಾರಿಗಳು, ಟಿಟಿಡಿಯೊಂದಿಗೆ ಯಾವುದೇ ಔಪಚಾರಿಕ ಒಪ್ಪಂದವಿಲ್ಲದ ಭೋಲೆಬಾಬಾ ಡೈರಿ, ಲಾಭದಾಯಕ ತುಪ್ಪದ ಪೂರೈಕೆ ಒಪ್ಪಂದವನ್ನು ಪಡೆಯಲು ಎಆರ್ ಡೈರಿಯನ್ನು ಮುಂಚೂಣಿಯಾಗಿ ಬಳಸಿದೆ ಎಂದು ಆರೋಪಿಸಿದ್ದಾರೆ. ದಾಖಲೆಗಳು ಎಆರ್ ಡೈರಿಯ ಹೆಸರಿನಲ್ಲಿದ್ದರೂ, ವಾಸ್ತವವಾಗಿ ಉತ್ಪನ್ನವನ್ನು ಭೋಲೆಬಾಬಾ ಒದಗಿಸಿತ್ತು. ನಂತರದ ಪರೀಕ್ಷೆಗಳಲ್ಲಿ ತಿಳಿದುಬಂದಂತೆ, ಲಡ್ಡು ಪ್ರಸಾದಕ್ಕೆ ಬಳಸಿರುವ ತುಪ್ಪವು ಡೈರಿ-ಆಧಾರಿತವಾಗಿರಲಿಲ್ಲ, ಬದಲಿಗೆ ಪಾಮ್ ಎಣ್ಣೆ ಮತ್ತು ರಾಸಾಯನಿಕಗಳ ಹಾನಿಕಾರಕಗಳ ಮಿಶ್ರಣವಾಗಿತ್ತು.
ಭೋಲೆಬಾಬಾ, ವೈಷ್ಣವಿ ಮತ್ತು ಎಆರ್ ಡೈರಿಗಳು ಒಟ್ಟಾಗಿ ಸೇರಿ ನೂರಾರು ಕೋಟಿಗಳ ವ್ಯಾಪಾರವನ್ನು ನಡೆಸಿವೆ ಎಂದು ಆರೋಪಿಸಲಾಗಿದೆ. ಸಹ-ಆರೋಪಿಯಾದ ಆಸಿಶ್ ರೋಹಿಲ್ಲಾ, ಸಾಕ್ಷಿಯಾಗಿ ಸಾಕ್ಷ್ಯ ನೀಡಲು ಒಪ್ಪಿಕೊಂಡಿದ್ದ. ಆದರೆ ಒತ್ತಡದಿಂದ ಚೆನ್ನೈಗೆ ಮತ್ತು ನಂತರ ದೆಹಲಿಗೆ ಸ್ಥಳಾಂತರಗೊಂಡಿದ್ದ ಎಂದು ಆರೋಪಿಸಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿರುವ ಕಾರಣ, ಜಾಮೀನಿನ ಮೇಲೆ ಬಿಡುಗಡೆಯಾದರೆ ಇತರ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಅಥವಾ ಬೆದರಿಕೆ ಹಾಕಬಹುದು ಎಂದು ಸಿಬಿಐ ವಾದಿಸಿದೆ.