ಬೆಂಗಳೂರು: ಸಿಎಂ ಹಾಗೂ ಡಿಸಿಎಂ ತಮ್ಮ ಸ್ವಾರ್ಥಕ್ಕಾಗಿ ಅಮಾಯಕರು ಸಾವನ್ನಪ್ಪುವಂತೆ ಮಾಡಿದ್ದಾರೆಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ ಗೆದ್ದಿದ್ದು ಆರ್ ಸಿಬಿ ತಂಡ. ಆದರೆ, ಫೋಟೋ ತೆಗೆಸಿಕೊಂಡಿದ್ದು ಮಾತ್ರ ಕೆಪಿಸಿಸಿ ತಂಡ. ಸಿಎಂಗೆ ಐದು ವರ್ಷ ಮ್ಯಾನ್ ಆಫ್ ದಿ ಮ್ಯಾಚ್ ಆಗಬೇಕು ಅಂತ ಕನಸು. ಆದರೆ, ಡಿಕೆ ಶಿವಕುಮಾರ್ ಗೆ ಸಿಎಂ ಸಿದ್ದರಾಮಯ್ಯರನ್ನು ರನ್ ಔಟ್ ಮಾಡಿಸಬೇಕು ಅಂತ ಆಸೆ. ಹೀಗಾಗಿಯೇ ತಮ್ಮ ಸ್ವಾರ್ಥಕ್ಕಾಗಿ ಪೊಲೀಸರ ಮೇಲೆ ಒತ್ತಡ ಹಾಕಿ, ಸನ್ಮಾನ ಇಟ್ಟುಕೊಂಡು ಜನರನ್ನು ಬಲಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕ್ರಿಕೆಟ್ ಬಗ್ಗೆ ಎಬಿಸಿಡಿ ಸಹ ಗೊತ್ತಿಲ್ಲ ಇವರಿಗೆ. ಇವರಿಗೆ ಎಸಿಬಿ ರಚಿಸಿದ್ದು ಮಾತ್ರ ಗೊತ್ತು. ಇವರ ಫ್ಯಾಮಿಲಿಗಳು ಫೋಟೋ ತೆಗೆಸಿಕೊಂಡಿವೆ. ಮ್ಯಾಚ್ ಆಡಿದವರು ಆಟಗಾರರು. ಆದರೆ, ಆ ಕಪ್ ಆಟಗಾರರಿಗೆ ಸಿಗಲೇ ಇಲ್ಲ. ಇವರೇ ಕೈಯಲ್ಲಿ ಎತ್ತಿ ಓಡಾಡಿದರು ಎಂದು ವ್ಯಂಗ್ಯವಾಡಿದ್ದಾರೆ.
ಪೊಲೀಸ್ ಕಮಿಷನರ್ ಅವರನ್ನು ಇದೇ ಮೊದಲ ಬಾರಿಗೆ ಅಮಾನತು ಮಾಡಲಾಗಿದೆ. ಕಾಲ್ತುಳಿತ ಉಂಟಾಗಿ ಅಮಾಯಕರನ್ನು ಎತ್ತಿಕೊಂಡು ಹೋದವರು ಪೊಲೀಸರು. ಡಿಕೆ ಅಲ್ಲ. ಸಿಎಂ ಅಲ್ಲ. ಆಕ್ಸಿಜನ್ ಕೊಡಿಸಿದ್ದು ಪೊಲೀಸ್. ಸಿಎಂ ಅಲ್ಲ. ಡಿಕೆ ಅಲ್ಲ. ಆದರೆ ನೀವು ಮಾಡಿದ್ದು ಫೋಟೊ ಕ್ಲಿಕ್ ಮಾಡಿಸಿಕೊಂಡಿದ್ದು ಮಾತ್ರ. ಆದರೆ, ಪೊಲೀಸರ ಮೇಲೆಯೇ ಕ್ರಮ ಕೈಗೊಳ್ಳಲಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೆಲ್ಲ ಬಿಟ್ಟು ನಾವೇ ರಾಜಕಾರಣ ಮಾಡುತ್ತೇವೆ ಅಂತಾ ಆರೋಪಿಸಿದ್ದಾರೆ. ಹೌದು…ನಾವು ನ್ಯಾಯ ಸಿಗೋತನಕ ರಾಜಕೀಯ ಮಾಡುತ್ತೇವೆ. ಪೊಲೀಸರನ್ನು ಹರಕೆಯ ಕುರಿ ಮಾಡಲು ಹೊರಟಿದ್ದೀರಿ. ಅದಕ್ಕೆ ನಾವು ರಾಜಕೀಯ ಮಾಡಲು ಹೊರಟಿದ್ದೇವೆ ಎಂದಿದ್ದಾರೆ.
ಸರ್ಕಾರಕ್ಕೆ ಮುಜುಗರ ಆಗಿದೆ. ಅದಕ್ಕೆ ಅಮಾನತು ಎಂದು ಅಮಾನತು ಆದೇಶದಲ್ಲಿ ಹಾಕಿದ್ದೀರಿ. ಸರ್ಕಾರಕ್ಕೆ ಮುಜುಗರ ಆದರೆ ಪೊಲೀಸ್ ಯಾಕೆ ಅಮಾನತು ಆಗಬೇಕು? ಪೊಲೀಸರು ಪರ್ಮಿಶನ್ ಕೊಡಲ್ಲ ಎಂದಾಗ ಸಿಎಂ ಮನೆಗೆ ಹೋದವರು ಯಾರು? ಪೊಲೀಸ್ ಪರ್ಮಿಶನ್ ಕೊಡಲ್ಲ ಎಂದಾಗ, ಹೋಗ್ರಿ ನಾನು ಇದ್ದೇನೆ ನೀವು ಕಾರ್ಯಕ್ರಮ ಮಾಡಿ ಎಂದು ಹೇಳಿದವರು ಯಾರು? ಸರ್ಕಾರ ಕಾನೂನು ಕೈಗೆ ಎತ್ತಿಕೊಂಡಿದೆ. ನೀವು ಎಷ್ಟೇ ದೊಡ್ಡವರು ಇದ್ದರೂ ಕಾನೂನು ಕೈಗೆ ತಗೊಂಡಿದ್ದೀರಿ. ಹೀಗಾಗಿ ಕ್ರಿಮಿನಲ್ ಕೇಸ್ ಈ ನಾಯಕರ ಮೇಲೆ ಹಾಕಬೇಕು ಎಂದು ಗುಡುಗಿದ್ದಾರೆ.