ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಹೆಡಗೇವಾರ್ ಸ್ಮೃತಿ ಮಂದಿರಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ, ಭಾವನಾತ್ಮಕ ಕೈಬರಹದ ಟಿಪ್ಪಣಿಯನ್ನು ಬರೆದಿಟ್ಟಿದ್ದಾರೆ. ತಮ್ಮ ಬರಹದಲ್ಲಿ ಅವರು ಸಂಘದ ತತ್ವ, ತಾತ್ವಿಕತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಮೋದಿಯವರು ಹಿಂದಿಯಲ್ಲಿ ಬರೆದ ಟಿಪ್ಪಣಿಯಲ್ಲಿ, “ಪೂಜ್ಯ ಡಾ. ಹೆಡಗೇವಾರ್ ಜೀ ಮತ್ತು ಗೌರವಾನ್ವಿತ ಗುರೂಜೀ ಅವರಿಗೆ ನಾನು ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆ. ಅವರ ಸ್ಮರಣೆಗಳನ್ನು ಸಂರಕ್ಷಿಸುವ ಈ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ನನಗೆ ಭಾವುಕತೆಯ ಅನುಭವವಾಗಿದೆ,” ಎಂದು ತಿಳಿಸಿದ್ದಾರೆ.
ಅವರು ಮುಂದುವರಿದು, “ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಮತ್ತು ಸಂಘಟನೆಯ ಮೌಲ್ಯಗಳಿಗೆ ಸಮರ್ಪಿತವಾದ ಈ ಪವಿತ್ರ ಸ್ಥಳವು ರಾಷ್ಟ್ರ ಸೇವೆಯಲ್ಲಿ ಮುನ್ನಡೆಯಲು ನಮಗೆ ಪ್ರೇರಣೆ ನೀಡುತ್ತದೆ.”

ಸ್ವಯಂಸೇವಕರಿಗೆ ಶಕ್ತಿಯ ಮೂಲ, ಈ ಸ್ಥಳದ ಮಹತ್ವವನ್ನು ವಿವರಿಸುತ್ತಾ, ಮೋದಿ ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ: “ಈ ಸ್ಥಳದೊಂದಿಗೆ ಸಂಬಂಧಿಸಿದ ಮಹಾನ್ ವ್ಯಕ್ತಿಗಳ ಸಮರ್ಪಣೆ ಮತ್ತು ಪರಿಶ್ರಮವು ದೇಶ ಸೇವೆಗೆ ಬದ್ಧರಾದ ಲಕ್ಷಾಂತರ ಸ್ವಯಂಸೇವಕರಿಗೆ ಶಕ್ತಿಯ ಮೂಲವಾಗಿ ಪರಿಣಮಿಸಿದೆ.”
“ನಮ್ಮ ಪ್ರಯತ್ನಗಳ ಮೂಲಕ ಭಾರತಮಾತೆಯ ಗೌರವ ಮುಂದುವರಿಯಲಿ,” ಎಂದು ಅವರು ತಮ್ಮ ಬರಹವನ್ನು ಮುಕ್ತಾಯಗೊಳಿಸಿದ್ದಾರೆ.
ಯುಗಾದಿ ಹಿನ್ನೆಲೆಯಲ್ಲಿ ಭೇಟಿ
ಹಿಂದೂ ಹೊಸ ವರ್ಷವಾದ ಯುಗಾದಿಯ ಹಿನ್ನೆಲೆಯಲ್ಲಿ ಮೋದಿ ಅವರು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿ, ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತರಿದ್ದರು.
ಮಾಧವ್ ನೇತ್ರಾಲಯ ಹಾಗೂ ಶಸ್ತ್ರಾಸ್ತ್ರ ಸೌಲಭ್ಯಕ್ಕೆ ಭೇಟಿ
ನಂತರ ಮೋದಿ ಅವರು ಮಾಧವ್ ನೇತ್ರಾಲಯ ಪ್ರೀಮಿಯಂ ಸೆಂಟರ್ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹೊಸ ಸೌಲಭ್ಯವು 250 ಹಾಸಿಗೆಗಳು, 14 ಓಪಿಡಿಗಳು ಮತ್ತು 14 ಆಧುನಿಕ ಆಪರೇಷನ್ ಥಿಯೇಟರ್ಗಳನ್ನು ಒಳಗೊಂಡಿರುತ್ತದೆ.
ಅವರು ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ನಲ್ಲಿ ನಿರ್ಮಾಣಗೊಂಡ ಮಾನವರಹಿತ ವೈಮಾನಿಕ ವಾಹನಗಳ (UAV) ಪೈಲಟ್ಲೆಸ್ ಟೆಸ್ಟಿಂಗ್ ಏರ್ಸ್ಟ್ರಿಪ್ ಮತ್ತು ಲೈವ್ ಮ್ಯೂನಿಷನ್ ಹಾಗೂ ವಾರ್ಹೆಡ್ ಪರೀಕ್ಷಾ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ.
ಛತ್ತೀಸ್ಗಢದಲ್ಲಿ ಮಹತ್ವದ ಯೋಜನೆಗಳಿಗೆ ಶಂಕುಸ್ಥಾಪನೆ
ನಾಗಪುರದ ಬಳಿಕ ಪ್ರಧಾನಿ ಇಂದು ಛತ್ತೀಸ್ಗಢಕ್ಕೆ ತೆರಳಲಿದ್ದಾರೆ. ಅಲ್ಲಿ ವಿದ್ಯುತ್, ತೈಲ ಮತ್ತು ನೈಸರ್ಗಿಕ ಅನಿಲ, ರೈಲ್ವೆ, ರಸ್ತೆ, ಶಿಕ್ಷಣ ಹಾಗೂ ವಸತಿ ವಿಭಾಗಗಳಿಗೆ ಸೇರಿದ 33,700 ಕೋಟಿ ರೂ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.