ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಒಡಕು ಮೂಡಿದೆ ಎಂಬ ಎಲ್ಲ ಊಹಾಪೋಹಗಳಿಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ತೆರೆ ಎಳೆದಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಭಿನ್ನಾಭಿಪ್ರಾಯದ ಊಹಾಪೋಹಗಳನ್ನು ನಿರಾಕರಿಸಿದ್ದಾರೆ. “ಆಡಳಿತಾರೂಢ ಮಿತ್ರಪಕ್ಷಗಳ ನಡುವೆ ಶೀತಲ ಸಮರವಿಲ್ಲ. ಅಸೆಂಬ್ಲಿ ಚುನಾವಣೆಯಲ್ಲಿ ನಾವು ಪ್ರತಿಪಕ್ಷಗಳ ವಿರುದ್ಧ ಯಶಸ್ವಿಯಾಗಿ ಹೋರಾಡಿ, ಪ್ರಚಂಡ ಗೆಲುವು ಸಾಧಿಸಿದ್ದೇವೆ. ಏನು ಮಾಡಬೇಕೆಂದು ನನಗೂ, ಏಕನಾಥ ಶಿಂಧೆಯವರಿಗೂ ಗೊತ್ತಿದೆ” ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ, ಏಕನಾಥ ಶಿಂಧೆಯವರೂ ಮಾತನಾಡಿ, “ನಾನು, ಮುಖ್ಯಮಂತ್ರಿ ಫಡ್ನವೀಸ್ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ಮಧ್ಯೆ ಎಲ್ಲವೂ ಥಂಡಾ, ಥಂಡಾ, ಕೂಲ್ ಕೂಲ್ ಆಗಿದೆ” ಎಂದಿದ್ದಾರೆ.
ಭಾನುವಾರ ನಡೆದ ಸಂಪುಟ ಸಭೆಯ ಬಳಿಕ ಫಡ್ನವೀಸ್, ಶಿಂಧೆ ಹಾಗೂ ಪವಾರ್ ಮೂವರೂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಫಡ್ನವೀಸ್, “ಪ್ರತಿಪಕ್ಷಗಳ ಪರಿಸ್ಥಿತಿ ನಮ್ಮಂತೆ ಇಲ್ಲ. ನಾವೆಲ್ಲ ಒಟ್ಟಿಗೆ ಇದ್ದೇವೆ… ಆದರೆ, ನಿಜವಾದ ಒಡಕು, ಅಸಮಾಧಾನ ಇರುವುದು ಪ್ರತಿಪಕ್ಷಗಳಲ್ಲಿ” ಎಂದಿದ್ದಾರೆ.
“ಇಂದು ನಾವು ಪ್ರತಿಪಕ್ಷಗಳನ್ನು ‘ಚಹಾಪಾನ್’ (ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಲಘು ಉಪಾಹಾರದೊಂದಿಗೆ ನಡೆಯುವ ಸಭೆ)ಗೆ ಆಹ್ವಾನಿಸಿದ್ದೆವು. ಆದರೆ ಅವರು ಅದನ್ನು ಬಹಿಷ್ಕರಿಸಿದರು. ಜೊತೆಗೆ, ಅವರೇ ಪ್ರತ್ಯೇಕ ಸಭೆ ನಡೆಸಿದರು. ಆದರೆ, ಅದರಲ್ಲಿ ಮಹಾ ವಿಕಾಸ ಅಘಾಡಿ ಯಾವೊಬ್ಬ ದೊಡ್ಡ ನಾಯಕನೂ ಬಂದಿರಲಿಲ್ಲ. ಅವರು ನಮಗೆ 9 ಪುಟಗಳ ಪತ್ರವನ್ನು ನೀಡಿದ್ದಾರೆ, ಅದರಲ್ಲಿ ಒಂಬತ್ತು ಜನರ ಹೆಸರುಗಳಿವೆ, ಆದರೆ ಸಹಿ ಇರುವುದು ಏಳು ಜನರದ್ದು ಮಾತ್ರ” ಎಂದು ಫಡ್ನವೀಸ್ ವ್ಯಂಗ್ಯಭರಿತರಾಗಿ ನುಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಿಂಧೆ, “ನೀವು ಎಷ್ಟೇ ಬ್ರೇಕಿಂಗ್ ನ್ಯೂಸ್ ಗಳನ್ನು ಕೊಟ್ಟರೂ, ನಾವು(ಮಹಾಯುತಿ) ಮಾತ್ರ ಬ್ರೇಕ್(ಒಡೆಯಲ್ಲ) ಆಗಲ್ಲ. ಮಹಾರಾಷ್ಟ್ರದಲ್ಲಿ ಇಷ್ಟೊಂದು ಬಿಸಿಲ ಬೇಗೆ ಇರುವಾಗ ಶೀತಲ ಸಮರ ನಡೆಯಲು ಹೇಗೆ ಸಾಧ್ಯ” ಎಂದೂ ನಗುತ್ತಾ ಪ್ರಶ್ನಿಸಿದರು.
ದೇವೇಂದ್ರ ಫಡ್ನವೀಸ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವ ಸಲುವಾಗಿ ತಾವು ಸಿಎಂ ಹುದ್ದೆಯನ್ನು ಬಿಟ್ಟುಕೊಡಬೇಕಾಗಿ ಬಂದಿದ್ದು ಏಕನಾಥ್ ಶಿಂಧೆ ಅವರಿಗೆ ರುಚಿಸಿಲ್ಲ. ವಿವಿಧ ಸಂದರ್ಭಗಳಲ್ಲಿ ಅವರ ನಡೆಯೂ ಫಡ್ನವೀಸ್ ವಿರುದ್ಧದ ಅಸಮಾಧಾನವನ್ನು ತೋರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಮೈತ್ರಿಕೂಟದೊಳಗಿನ ಬಿರುಕು ಮೂಡಿದೆ ಎಂಬ ಮಾತುಗಳು ಇತ್ತೀಚೆಗೆ ತುಸು ಹೆಚ್ಚಾಗಿ ಕೇಳಿಬರತೊಡಗಿದ್ದವು.
ಶಿಂಧೆ ಬಣದ ಹಲವಾರು ನಾಯಕರ ಭದ್ರತೆಯನ್ನು ಕಡಿತಗೊಳಿಸಿರುವುದು, ಮುಂದಿನ ಕುಂಭಮೇಳವನ್ನು ಆಯೋಜಿಸಲಿರುವ ರಾಯಗಢ ಮತ್ತು ನಾಸಿಕ್ ಜಿಲ್ಲೆಗಳಿಗೆ ‘ಉಸ್ತುವಾರಿ ಸಚಿವರ’ ನೇಮಕ ಮತ್ತಿತರ ವಿಚಾರಗಳು ಶಿಂಧೆ ಅವರನ್ನು ರೊಚ್ಚಿಗೆಬ್ಬಿಸಿದೆ ಎಂದು ಹೇಳಲಾಗಿತ್ತು.
ಹೀಗಿದ್ದರೂ, ಆಡಳಿತಾರೂಢ ಮೈತ್ರಿಕೂಟವು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪುನರುಚ್ಚರಿಸುತ್ತಲೇ ಬಂದಿತ್ತು. ಈಗ ಮಹಾಯುತಿಯ ಮೂವರು ದಿಗ್ಗಜರೂ ಒಂದೇ ವೇದಿಕೆಯಲ್ಲಿ ನಿಂತು ಎಲ್ಲ ವದಂತಿಗಳಿಗೂ ತೆರೆ ಎಳೆದಿದ್ದಾರೆ.