ಬೆಂಗಳೂರು : ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಗತವಾಗಿ ಯಾರನ್ನೋ ಟಾರ್ಗೇಟ್ ಮಾಡಬೇಕೆನ್ನುವ ಉದ್ದೇಶವಿಲ್ಲ. ಉದ್ದೇಶ ಪೂರ್ವಕವಾಗಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಗಜನಿ ಟೂಲ್ ಆಗಿ ರಾಜ ಜಯಚಂದ್ರನನ್ನ ಬಳಸಿಕೊಂಡ. ಅದೇ ರೀತಿ ಇಲ್ಲಿಯೂ ತಿಮರೋಡಿ ಮತ್ತು ಮಟ್ಟಣ್ಣನವರ್ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ರವಿ, ಧರ್ಮಸ್ಥಳ ಪ್ರಕರಣದ ಹಿಂದೆ ದೊಡ್ಡ ದುರುದ್ದೇಶ ಇದೆ. ಸರ್ಕಾರ ಯಾಕೆ ಅಪಪ್ರಚಾರ ಮಾಡಿರುವವರ ಮೇಲೆ ಕ್ರಮ ತೆಗೆದುಕೊಂಡಿಲ್ಲ? ಎಂದು ಪ್ರಶ್ನಿಸಿದ್ದಲ್ಲದೇ, ಸಿಎಂ ಮೇಲೆ ಆರೋಪ ಕೇಳಿಬಂದಾಗ ಕಾಂಗ್ರೆಸ್ಸಿಗರಿಗೆ ನೋವಾಯಿತು. ಆದರೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಮೇಲೆ ಅಪಚಾರ ಮಾಡಿದ್ದಾಗ ಯಾಕೆ ನೋವಾಗಿಲ್ಲ ? ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಯ್ಯೂಟೂಬರ್ಸ್ ಅವರನ್ನೂ ಕೂಡ ತನಿಖೆಗೆ ಒಳಪಡಿಸಿ. ಇಲ್ಲದಿದ್ದಲ್ಲಿ ನಿಮ್ಮ ಮೇಲೆ ಆಪಾದನೆ ಬರುತ್ತದೆ ಎಂದು ಹೇಳಿದ್ದಾರೆ.
ಇನ್ನು, ಮಾಜಿ ಐಪಿಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಇದರ ಹಿಂದೆ ಬರುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ತಮಿಳುನಾಡಿನಲ್ಲಿ ಸನಾತನ ಧರ್ಮಕ್ಕೆ ಅಪಮಾನಮಾಡಿರುವವರ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಆ ಖಾಯಿಲೆಯೂ ಇವರಿಗೆ ಅಂಟಿರಬಹದು. ನಾವು ದೇವರನ್ನ ಪೂಜಿಸಿದಮೇಲೆ ಜಗತ್ತಿಗೆ ಒಳ್ಳೆಯದನ್ನು ಬಯಸುತ್ತೇವೆ. ಆದರೆ ಹಿಂದೂ ಧರ್ಮದ ಬಗ್ಗೆಯೇ ಅವರು ಅವಹೇಳನ ಮಾಡುತ್ತಾರೆ. ಅಂತವರ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಎಂದು ಟೀಕಿಸಿದ್ಧಾರೆ.


















