26 ಪ್ರವಾಸಿಗರ ಹತ್ಯೆಗೆ ಪ್ರತೀಕಾರ ಯಾವಾಗ ಎನ್ನುವ ಯಕ್ಷ ಪ್ರಶ್ನೆ ಪ್ರತಿ ಭಾರತೀಯನ್ನು ಬಿಟ್ಟೂ ಬಿಡದೆ ಕಾಡುತ್ತಿತ್ತು. ಏಪ್ರಿಲ್ 22ರ ನರಮೇಧದ ಆಕ್ರೋಶ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿಗಿನಿಗಿ ಎನ್ನುತ್ತಲೇ ಇತ್ತು. ಆದ್ರೆ, ಹಗೆ ತೀರಿಸುಕೊಳ್ಳೋ ಧಾವಂತಕ್ಕೆ ಬೀಳದ ಭಾರತ ಸದ್ದಿಲ್ಲದೆ ಒಳಗಿಂದೊಳಗೇ ವ್ಯೂಹ ರೂಪಿಸುವ ಕಾರ್ಯ ಆರಂಭಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ಒಂದು ಚಕ್ರವ್ಯೂಹವನ್ನು ಹೆಣೆಯಲಾಗುತ್ತಿತ್ತು.
ದೆಹಲಿಯ ಲೋಕಕಲ್ಯಾಣ ಮಾರ್ಗ್ ನಲ್ಲಿ ಮುಹೂರ್ತ
ದೆಹಲಿಯ ಲೋಕಕಲ್ಯಾಣ ಮಾರ್ಗ್ ನಲ್ಲಿರುವ ಪ್ರಧಾನಿ ಮೋದಿ ಅಧಿಕೃತ ನಿವಾಸದಲ್ಲಿ ಏಪ್ರಿಲ್ 22ರ ಬಳಿಕ ಅದೆಷ್ಟೋ ಸಾಲು ಸಾಲು ಸಭೆಗಳು ನಡೆದಿವೆ. ಹೊರಜಗತ್ತಿನಿಂದ ನಿಗೂಢವಾಗಿ ನಡೆದ ಈ ಮೀಟಿಂಗ್ ಗಳು ನಿಜಕ್ಕೂ ಅದೆಷ್ಟು ನಿರ್ಣಾಯಕವಾಗಿದ್ದವು ಎನ್ನುವುದು ಈಗ ಬಯಲಾಗಿದೆ. ಹೌದು…ಭಾರತದ ಜೇಮ್ಸ್ ಬಾಂಡ್ ಅಂತಲೇ ಕರೆಯಿಸಿಕೊಳ್ಳುವ ಅಜಿತ್ ದೋವಾಲ್ ಮೋದಿ ಜೊತೆ ಕೂತು ಹೆಣೆದ ವ್ಯೂಹವೇ ಸಿಂಧೂರ ಚಕ್ರವ್ಯೂಹ.
ಪಾಕಿಸ್ತಾನದಲ್ಲಿ ಪಾಕಿಗಳಂತೆ ಬದುಕಿದ್ದ ಅಜಿತ್ ದೋವಾಲ್
ಕೇರಳ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದ ಅಜಿತ್ ದೋವಾಲ್ ಹಲವು ವರ್ಷಗಳ ಕಾಲ ಪಾಕಿಸ್ತಾನದಲ್ಲೇ ಗೂಢಾಚಾರಿಯಾಗಿ ಬದುಕಿದವರು. ರಾ ಏಜೆಂಟ್ ಆಗಿ ಪಾಕ್ ಗೆ ಎಂಟ್ರಿ ಕೊಟ್ಟ ದೋವಾಲ್, ಅದೆಷ್ಟೋ ಮಹತ್ವದ ಮಾಹಿತಿಗಳನ್ನು ಹೆಕ್ಕಿ ತೆಗೆದು ಭವಿಷ್ಯದ ಅನಾಹುತಗಳನ್ನು ತಪ್ಪಿಸಿದ್ದು ಇದೇ ಜೇಮ್ಸ್ ಬಾಂಡ್. 1988ರ ಆಪರೇಷನ್ ಬ್ಲ್ಯಾಕ್ ಥಂಡರ್ ನ ಸಾರಥ್ಯ ವಹಿಸಿದ್ದೂ ಇದೇ ದೋವಲ್. ನಿವೃತ್ತಿ ಬಳಿಕ ಭಾರತದ ರಕ್ಷಣಾ ಸಲಹೆಗಾರರಾಗಿ ಮೋದಿಯ ಆಪ್ತ ವಲಯದ ಬಂಟನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆಪರೇಷನ್ ಸಿಂಧೂರ್ ಗೆ ದೋವಾಲ್ ಮುನ್ನುಡಿ
ಭಾರತೀಯ ಹೆಣ್ಣು ಮಗಳ ಸಿಂಧೂರವನ್ನು ಕಸಿದವರ ಸಂಹಾರಕ್ಕೆ ಸಿಂಧೂರವೇ ಅಸ್ತ್ರವಾಗಬೇಕೆನ್ನೋ ಮೋದಿಯವರ ಹೆಬ್ಬಯಕೆಗೆ ಬೆನ್ನೆಲುಬಾಗಿ ನಿಂತದ್ದೇ ದೋವಾಲ್. ಈ ಕಾರ್ಯಾಚರಣೆಗಾಗಿಯೇ ವಿಶೇಷ ವಾರ್ ರೂಂ ರೂಪಿಸಿದ್ದ ದೋವಾಲ್, ಸೇನೆಯ ಮೂರು ವಿಭಾಗಗಳನ್ನು ಬಳಸಿಕೊಂಡು ಉಗ್ರರ ಸದೆಬಡೆಯೋದು ಹೇಗೆ ಅನ್ನೋ ತಂತ್ರ ರೂಪಿಸಿದರು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುತಾಣಗಳ ಪಕ್ಕಾ ಮಾಹಿತಿ ಕಲೆಹಾಕಿದ್ದ ದೋವಾಲ್, ಟಾರ್ಗೆಟ್ ಫಿಕ್ಸ್ ಮಾಡಿದ್ರು. ಶತ್ರುಗಳ ಕಣ್ತಪ್ಪಿಸಿ ಒಳನುಗ್ಗಿ ಹೇಗೆ ಕಾರ್ಯ ಸಾಧಿಸಬೇಕು ಅನ್ನೋದನ್ನು ದೋವಾಲ್ ಪಕ್ಕಾ ಪ್ಲ್ಯಾನ್ ಮಾಡಿದ್ರು. ಅಷ್ಟೇ ಅಲ್ಲಾ ಇವತ್ತು ಸಮಸ್ತ ದೇಶವೇ ಹೆಮ್ಮೆ ಪಡುವಂತೆ ಆಪರೇಷನ್ ಸಿಂಧೂರವನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಭಾರತದ ಹೆಮ್ಮೆಯ ಅಧಿಕಾರಿಗೆ ಸಮಸ್ತ ದೇಶವಾಸಿಗಳೇ ಜೈಹೋ ಹೇಳುತ್ತಿದ್ದಾರೆ.