ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟೆದ್ದೇನೆ ಎಂದು ಅನಾಮಿಕ ವ್ಯಕ್ತಿ ಕೊಟ್ಟ ದೂರಿನ ತನಿಖೆಯನ್ನು ಅಧಿಕೃತವಾಗಿ ಎಸ್ಐಟಿ ಇಂದಿನಿಂದ ನಡೆಸುತ್ತಿದೆ. ನಿನ್ನೆ ಎಸ್ಐಟಿ ತಂಡ ಮಂಗಳೂರು ತಲುಪಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಬೆಳ್ತಂಗಡಿಯಲ್ಲಿ ಕಚೇರಿ ತೆರದಿರುವ ಎಸ್ಐಟಿ ತನಿಖೆಗೆ ಇಳಿದಿದೆ. ಡಿಐಜಿ ಅನುಚೇತ್ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬಳಿಕ ತಡರಾತ್ರಿ ಧರ್ಮಸ್ಥಳ ಠಾಣೆಗೆ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಆಗಮಿಸಿ ಕೇಸ್ ಫೈಲ್ ಪಡೆದಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್, ಪ್ರಕರಣದ ಈವರೆಗಿನ ತನಿಖಾಧಿಕಾರಿ ಸಮರ್ಥ್ ಗಾಣಿಗೇರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬೆಳ್ತಂಗಡಿಯಲ್ಲಿ ಎಸ್ಐಟಿ ಕಚೇರಿ ತೆರೆದಿದ್ದು, ಪ್ರಕರಣದ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿದ ಅಧಿಕಾರಿಗಳು, ಪ್ರಕರಣ ತನಿಖೆಗೆ ಧರ್ಮಸ್ಥಳಕ್ಕೂ ಭೇಟಿ ನೀಡಲಿದ್ದಾರೆ. ತನಿಖೆ ಒಂದು ಹಂತಕ್ಕೆ ಬಂದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ದೂರುದಾರನನ್ನ ಶವ ಹೂತಿಟ್ಟ ಸ್ಥಳಗಳಿಗೆ ಕರೆದುಕೊಂಡು ಹೋಗಿ ಆತನ ಸಮ್ಮುಖದಲ್ಲೇ ಮಣ್ಣು ಅಗೆದು ಶವಗಳನ್ನ ಹೊರ ತೆಗೆಯೋ ಪ್ರಕ್ರಿಯೆ ನಡೆಯಲಿದೆ. ಆತನ ದೂರಿನಂತೆ ಸುಮಾರು 20 ವರ್ಷಗಳ ಹಿಂದೆ ಶವಗಳನ್ನ ಹೂತಿಟ್ಟಿರೋದು ನಿಜವಾಗಿದ್ದರೆ ಅದರ ಅಸ್ತಿಪಂಜರಗಳು ಸಿಗೋ ಸಾಧ್ಯತೆ ಇದೆ. ಆ ಬಳಿಕ ಅದರ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ.