ಮಹಾರಾಷ್ಟ್ರ: ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳೊಂದಿಗೆ ಬಂದು ಯುವಕನೊಬ್ಬನ ಕೊಲೆಗೆ ಯತ್ನಿಸಿದಾಗ, ತಾಯಿ ಕಾಪಾಡಿರುವ ಘಟನೆ ನಡೆದಿದೆ.
ನಾಲ್ವರು ದುಷ್ಕರ್ಮಿಗಳು ಬಂದು ರಸ್ತೆ ಬದಿ ನಿಂತಿದ್ದ ಯುವಕನ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಯುವಕನ ತಾಯಿ ತನ್ನ ಪ್ರಾಣ ಲೆಕ್ಕಿಸದೇ ಮಗನ ರಕ್ಷಣೆಗೆ ಮುಂದಾಗಿದ್ದಾರೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿಯ ಧೈರ್ಯ ಹಾಗೂ ಸಾಹಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಕೊಲ್ಲಾಪುರದ ಜಯಸಿಂಗ್ಪುರ ಪ್ರದೇಶದಲ್ಲಿ ಆಗಸ್ಟ್ 18ರಂದು ಮಧ್ಯಾಹ್ನ 1:30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
@gharkekalesh ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನ ಸಾಕಷ್ಟು ವೀಕ್ಷಣೆ ಕಂಡಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಸ್ಕೂಟರ್ ನಲ್ಲಿ ರಸ್ತೆ ಬದಿಯಲ್ಲಿ ಕುಳಿತು ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಮೂವರು ವ್ಯಕ್ತಿಗಳು ಸ್ಕೂಟರ್ ನಲ್ಲಿ ಬಂದು ಅವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲು ಯತ್ನಿಸಿದ್ದಾರೆ. ವ್ಯಕ್ತಿ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಕೂಡಲೇ ಮಗನೊಂದಿಗೆ ಇದ್ದ ತಾಯಿ ದಾಳಿಕೋರರ ಮೇಲೆ ಎಸೆಯಲು ಕಲ್ಲು ಎತ್ತಿಕೊಂಡಿದ್ದಾರೆ. ಹೀಗಾಗಿ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.