ರಾತ್ರೋ ರಾತ್ರಿ 200ಕ್ಕೂ ಹೆಚ್ಚು ಆಫ್ರಿಕನ್ ಮಹಾಗನಿ ಗೀಡಳನ್ನು ಕಿಡಿಗೇಡಿಗಳು ಕತ್ತರಿಸಿ ನಾಶ ಮಾಡಿರುವ ಘಟನೆ ಕಲಬುರಗಿ ತಾಲ್ಲೂಕಿನ ತಾಡ್ ತೆಗನೂರ್ ಗ್ರಾಮದಲ್ಲಿ ನಡೆದಿದೆ. ಗಿಡಗಳ ನಾಶದಿಂದ ರೈತರ ಅರಣ್ಯ ಕೃಷಿ ಆದಾಯಕ್ಕೆ ಕೊಡಲಿ ಏಟು ಬಿದ್ದಂತಾಗಿದೆ. ತಡರಾತ್ರಿ ಜಮೀನಿಗೆ ಏಂಟ್ರಿ ಕೊಟ್ಟಿದ್ದ ಕಿಡಿಗೆಡಿಗಳಿಂದ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ರೈತ ಶಶಿಕಾಂತ್ ಎನ್ನುವವರು ಒಂದು ಎಕರೆ ಜಮೀನಿನಲ್ಲಿ 500 ಮಹಾಗನಿ ಗಿಡಗಳನ್ನು ಬೆಳೆಸಿದ್ದರು.
ಕಿಡಿಗೇಡಿಗಳು ಕಳೆದ ಎರಡು ವರ್ಷಗಳ ಹಿಂದೆ ಬೆಂಕಿ ಹಚ್ಚಿ 250 ಗಿಡಗಳನ್ನು ನಾಶ ಮಾಡಿದ್ದರು. ಇದೀಗ 20-25 ಅಡಿ ಅಡಿ ಎತ್ತರಕ್ಕೆ ಹುಲುಸಾಗಿ ಗಿಡಗಳು ಬೆಳೆದು ನಿಂತಿದ್ದವು. 200ಕ್ಕೂ ಅಧಿಕ ಗಿಡಗಳನ್ನ ಕೊಡಲಿಯಿಂದ ಕಡಿದು ನಾಶ ಪಡಿಸಲಾಗಿದೆ. ಸುಮಾರು 50-60 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಶಶಿಕಾಂತ್ ನೀರಾಸೆಯಾಗಿದ್ದು, ರೈತನ ಏಳಿಗೆಯನ್ನು ಸಹಿಸದೆ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.