ಮೈಸೂರು: ದಸರಾ ನಂತರ ಮೈಸೂರಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಅನಿಸುತ್ತದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಯದುವೀರ್ ಒಡೆಯರ್, ದಸರಾ ನಂತರ ಮೈಸೂರಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಅನಿಸುತ್ತದೆ. ಈ ಬಾರಿ ದಸರಾ ಸಂಪೂರ್ಣ ಗೊಂದಲವಾಯಿತು. ಪಾಸ್ ಇದ್ದವರ ದಸರಾ ಆಯಿತು, ಉಳ್ಳವರು ದಸರಾ ದರ್ಬಾರ್ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತಿಹಾಸದಲ್ಲಿ ಮೈಸೂರು ಸ್ವಚ್ಛತೆ, ಒಳ್ಳೆಯ ಆಡಳಿತಕ್ಕೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ಕಾನೂನು ಆಡಳಿತ ಕುಸಿಯುತ್ತಿದೆ. ಈ ಹಿಂದೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಆಯಿತು. 340 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಯಿತು. ಮಹಾರಾಷ್ಟ್ರ ಪೊಲೀಸರು ಇದನ್ನು ಕಂಡು ಹಿಡಿದರು. ಅರಮನೆ ಮುಂಭಾಗ ಮೊನ್ನೆ ಒಂದು ಕೊಲೆ ಆಯಿತು. ಬಲೂನ್ ಮಾರಾಟ ಮಾಡುವ ಮಗು ಮೇಲೆ ಹೀನ ಕೃತ್ಯ ಆಗಿದೆ. ಮೈಸೂರಿನಲ್ಲಿ ಇಂತಹ ಘಟನೆಗಳು ಈ ಹಿಂದೆ ಆಗಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಗರದ ಹೃದಯ ಭಾಗದಲ್ಲೇ ಇಂತಹ ಘಟನೆಗಳು ನಡೆದರೆ ಹೇಗೆ?. ಕಿಡಿಗೇಡಿಗಳಿಗೆ ಯಾವುದೇ ರೀತಿಯ ಭಯ ಇಲ್ಲ. ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಇದು ನನ್ನ ತವರು ಎಂದು ಹೇಳುತ್ತಾರೆ. ಈಗ ಇಂತಹ ಘಟನೆಗಳನ್ನು ಆಗದಂತೆ ತಡೆಯಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ದಸರಾ ವೀಕ್ಷಣೆಗೆ ಸಿಟ್ಟಿಂಗ್ ವ್ಯವಸ್ಥೆ ಕಡಿಮೆ ಮಾಡಿ, ಪಾಸ್ ಹೆಚ್ಚು ಕೊಟ್ಟರು. ಆದರೆ, ಪಾಸ್ ಇದ್ದವರಿಗೂ ಅರಮನೆ ಒಳಗಡೆ ಬಿಡಲಿಲ್ಲ. ಇದು ಕೇವಲ ಕಾಂಗ್ರೆಸ್ ನಾಯಕರ ದಸರಾ ಆಯಿತು. ಜನ ಸಾಮಾನ್ಯರ ದಸರಾ ಆಗಲಿಲ್ಲ, ನಾಗರಿಕರಿಗೆ ಅನುಕೂಲ ಮಾಡಲಿಲ್ಲ. ದಸರಾ ಪಾಸ್ ಬಗ್ಗೆ ಸಭೆಯಲ್ಲಿ ಏನು ಹೇಳಲ್ಲ. ಇದು ಕೇವಲ ಉಳ್ಳವರ ದಸರಾ ದರ್ಬಾರ್ ಆಯಿತು. ಎಂಪಿ ಗಳಿಗೆ ಇಷ್ಟು ಎಂಎಲ್ಎ ಗಳಿಗೆ ಇಷ್ಟು ಎಂದು ಪಾರದರ್ಶಕವಾಗಿ ಪಾಸ್ ಹಂಚಬೇಕು. ಇಲ್ಲದಿದ್ದರೆ ಎಲ್ಲವನ್ನೂ ಟಿಕೆಟ್ ಮಾಡಲಿ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಆಗಬೇಕು. ದಸರಾ ಪಾಸ್ ವಿಚಾರದಲ್ಲಿ ಬದಲಾವಣೆ ಅಗತ್ಯ ಎಂದು ಹೇಳಿದ್ದಾರೆ.
ಸ್ಥಳೀಯ ಚುನಾವಣೆ ಆಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ಅನ್ಯಾಯ ಆಗಿದೆ. ಪಾಲಿಕೆ ಚುನಾವಣೆ ನಡೆಸದೆ ಸರ್ಕಾರ ಕುಳಿತಿದೆ. ಕೇಂದ್ರದಿಂದ ಬಂದ ಹಣ ವಾಪಾಸ್ ಹೋಗಿದೆ. ಈ ರೀತಿ ಆದರೆ ಮೈಸೂರು ನಗರದ ಅಭಿವೃದ್ಧಿ ಹೇಗೆ ಸಾಧ್ಯ?. ಯಾವಾಗಲೂ ಸಂವಿಧಾನ ಸಂವಿಧಾನ ಎಂದು ಹೇಳುತ್ತಾರೆ. ಆದರೆ, ಸಂವಿಧಾನದ ಪ್ರಕಾರ ಆಡಳಿತ ಮಾಡುತ್ತಿಲ್ಲ. ಮೈಸೂರು ಪಾಲಿಕೆ ಶೀಘ್ರವೇ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಹೋರಾಟಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.