ಧಾರವಾಡ : ಸಮಷ್ಟಿ ಕೇಂದ್ರೀತ ಶ್ರೀಗುರುವಿನ ಉಪದೇಶದಿಂದ ಮಾತ್ರ ಮಾನವನ ಬದುಕು ರಾಗ-ದ್ವೇಷಗಳಿಂದ ಮತ್ತು ದ್ವಂದ್ವ-ವೈರುಧ್ಯಗಳಿಂದ ಮುಕ್ತವಾಗಿ ಮುಕ್ತಿಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ. ಹಾಗಾಗಿ ಬದುಕಿನ ಸಾಕ್ಷಾತ್ಕಾರ ಸಂಪಾದನೆಗೆ ಗುರುಕಾರುಣ್ಯ ಅತೀ ಅಗತ್ಯವಾಗಿದೆ ಎಂದು ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ಅವರು ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ನರನು ಹರನಾಗಲು, ಜೀವನು ಶಿವನಾಗಲು, ಮಾನವನು ಮಹಾದೇವನಾಗಲು, ಜೀವಾತ್ಮ ಪರಮಾತ್ಮನಾಗಲು ಗುರುಸಾನ್ನಿಧ್ಯದ ಮಾರ್ಗದರ್ಶನ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಹಾತಪಸ್ವಿಗಳಾಗಿರುವ, ನಿರ್ವಿಕಲ್ಪ ಸಮಾಧಿಸ್ಥರಾಗಿರುವ, ಆದಿಶಕ್ತಿ ಮಾತೆಯ ನಿಜರೂಪ ದರ್ಶನ ಪಡೆದಿರುವ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಶೃದ್ಧಾ-ಭಕ್ತಿಯಿಂದ ಪಾಲ್ಗೊಂಡ ಎಲ್ಲರಿಗೂ ಗುರುಕಾರುಣ್ಯ ಪ್ರಾಪ್ತವಾಗುತ್ತದೆ ಎಂದೂ ಶ್ರೀಗಳು ಹೇಳಿದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಇಹದ ಬದುಕನ್ನು ಜಯಿಸಬೇಕಾಗಿದೆ. ಮನುಕುಲದ ಮನಸ್ಸುಗಳಿಗೆ ಸತ್ಯ-ಶುದ್ಧ ಸಾತ್ವಿಕ ಸಂಸ್ಕಾರದ ಘನತೆಯನ್ನು ಕಲ್ಪಿಸುವುದೇ ಜಾತ್ರಾ ಮಹೋತ್ಸವಗಳ ಪ್ರಮುಖವಾದ ಉದ್ದೇಶ. ದೇವರ ಇಲ್ಲವೇ ಧರ್ಮ ಗುರುಗಳ ಹೆಸರಿನಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಎಲ್ಲರೂ ಒಂದೆಡೆ ಭಕ್ತಿಯ ಭಾವನಾತ್ಮಕ ತನ್ಮಯತೆಯಲ್ಲಿ ಐಕ್ಯತೆ ಸಾಧಿಸಿ ಮನಸ್ಸುಗಳನ್ನು ತಿಳಿಗೊಳಿಸಿಕೊಳ್ಳುವ ಗುರಿ ಹೊಂದಿದಾಗ ಸಾರ್ಥಕತೆ ಒಡಮೂಡುತ್ತದೆ ಎಂದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಎಂ.ಸಿ. ಹುಲ್ಲೂರ, ವ್ಹಿ.ಬಿ. ಕೆಂಚನಗೌಡರ, ಬಿ.ಸಿ.ಕೊಳ್ಳಿ, ಪರಮೇಶ್ವರ ಅಕ್ಕಿ, ವಕೀಲ ಸುನೀಲ ಗುಡಿ, ಚಂಬಣ್ಣ ಉಂಡೋಡಿ, ಚೆನ್ನಬಸಪ್ಪ ಪೂಜಾರ, ನಿಂಗಪ್ಪ ಮಾದಿಗ್ಗೊಂಡ, ಶಿವಾನಂದ ತಡಕೋಡ, ಉಮೇಶ ಶಿರಕೋಳ, ಸೋಮಲಿಂಗಶಾಸ್ತ್ರೀ ಗುಡ್ಡದಮಠ ಇದ್ದರು.
ಕನ್ನಡ ನಿಯತಕಾಲಿಕದ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಹಾಗೂ ವಿಜಯಕುಮಾರ ಇಟಗಿ ಮಾತನಾಡಿದರು. ಕಲಬುರ್ಗಿ ಜಿಲ್ಲೆ ಹುಲ್ಲೂರಿನ ಮಹಾಂತಯ್ಯಸ್ವಾಮಿ ಹಿರೇಮಠ ಅವರನ್ನು ಗೌರವಿಸಲಾಯಿತು. ಗದಗ-ಡೋಣಿ ಹಿರೇಮಠದ ಶಶಿಧರ ಶಾಸ್ತ್ರೀಜಿ ಪುರಾಣ ಪ್ರವಚನ ನೀಡಿದರು. ವೀರೇಶಕುಮಾರ ಮಳಲಿ ಅವರ ಸಂಗೀತ ಸೇವೆಗೆ ಸಿದ್ಧರಾಮ ಬ್ಯಾಕೋಡ ಸಿಂದಗಿ ತಬಲಾಸಾಥ ನೀಡಿದರು. ನಂತರ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ಜರುಗಿತು.