ಬೆಂಗಳೂರು: ಸಾಧನೆ ಎಂಬುವುದು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂಬ ಮಾತಿದೆ. ಸಾಧನೆ ಮಾಡಲು ಪರಿಶ್ರಮ ಇರಬೇಕೇ ವಿನಹ ಅದೃಷ್ಟ ಅಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅಂದರೆ ಏನೇ ಕಷ್ಟ ಎದುರಾದರೂ ಸಾಧಿಸುವ ಛಲದ ಜೊತೆಗೆ ಪರಿಶ್ರಮ ಬೇಕಾಗುತ್ತದೆ.
ಆಗ ಮಾತ್ರ ದೊಡ್ಡ ದೊಡ್ಡ ಬಂಡೆಗಳು ಕೂಡ ಚಿಕ್ಕ ಕಲ್ಲಿನ ರೀತಿ ಕಾಣಿಸುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಅಂಧ ಹುಡುಗಿ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು ನಾಗಪುರ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಹೌದು, ಜಲಗಾಂವ್ ರೈಲು ನಿಲ್ದಾಣದಲ್ಲಿ 25 ವರ್ಷಗಳ ಹಿಂದೆ ಕಸದ ಬುಟ್ಟಿಯಲ್ಲಿ ಪತ್ತೆಯಾಗಿದ್ದ ಅಂಧ ಬಾಲಕಿ ಮಾಲಾ ಪಾಪಲ್ಕರ್, ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ನಾಗ್ಪುರ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಪಡೆದಿದ್ದಾಳೆ. ಅವಳ ಹೋರಾಟ ಮತ್ತು ಧೈರ್ಯ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಮಾಲಾ ಹುಟ್ಟಿನಿಂದಲೇ ಕುರುಡಳಾಗಿದ್ದರೂ, ಅನಾಥಾಶ್ರಮದ ಬೆಂಬಲದಿಂದ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾಳೆ.
ಮಾಲಾ ನಾಗ್ಪುರ ಕಲೆಕ್ಟರೇಟ್ನಲ್ಲಿ ತನ್ನ ಮೊದಲ ಹುದ್ದೆಯನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾಳೆ. ಕಳೆದ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ (ಎಂಪಿಎಸ್ಸಿ) ಕ್ಲರ್ಕ್-ಕಮ್-ಟೈಪಿಸ್ಟ್ ಪರೀಕ್ಷೆಯಲ್ಲಿ (ಗ್ರೂಪ್ ಸಿ) ಉತ್ತೀರ್ಣರಾಗುವ ಮೂಲಕ ಮಾಲಾ ಪಾಪಲ್ಕರ್ ಸುದ್ದಿಯಾಗಿದ್ದರು. ಮುಂದಿನ 8-10 ದಿನಗಳಲ್ಲಿ ಮಾಲಾ ಕೆಲಸಕ್ಕೆ ವರದಿ ಮಾಡಿಕೊಳ್ಳುವ ಸಾಧ್ಯತೆಯಿದೆ.