ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ್ದ ದಾಳಿಗೆ ಭಾರತದ ಸೇನೆಯು ಸೇಡು ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ಇದರೊಂದಿಗೆ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ದಾಳಿಯ ವಿಡಿಯೋಗಳು ಲಭ್ಯವಾಗಿದ್ದು, ಸಾಕ್ಷಿ ಕೇಳುವವರಿಗೂ ಸೇನೆ ಉತ್ತರ ನೀಡಿದೆ.
ಹೌದು, ಉರಿ ದಾಳಿ ಬಳಿಕ ಭಾರತೀಯ ಸೇನೆ ಕೈಗೊಂಡ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ ದಾಳಿ ಬಳಿಕ ಮಾಡಿದ ಬಾಲಾಕೋಟ್ ಏರ್ ಸ್ಟ್ರೈಕ್ ಬಗ್ಗೆ ಭಾರತದಲ್ಲಿ ಕೆಲವರು ಸಾಕ್ಷ್ಯ ಕೇಳಿದ್ದರು. ಆಗ ದೆಹಲಿ ಮುಖ್ಯಮಂತ್ರಿ ಆಗಿದ್ದ ಅರವಿಂದ್ ಕೇಜ್ರಿವಾಲ್ ಅವರಂತಹ ರಾಜಕಾರಣಿಗಳು ಕೂಡ ಸಾಕ್ಷ್ಯ ಕೇಳಿ ಭಾರತದ ಸೇನೆಯ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದರು. ಆದರೆ ಈಗ ಭಾರತದ ದಾಳಿಯ ಸ್ಪಷ್ಟ ವಿಡಿಯೋಗಳು ದೊರೆತಿವೆ.
ದಾಳಿ ಒಪ್ಪಿಕೊಂಡ ಪಾಕಿಸ್ತಾನ
ಭಾರತವು ವಾಯುದಾಳಿ ನಡೆಸಿರುವುದನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ. “ಪಿಒಕೆಯಲ್ಲಿ ಭಾರತ ದಾಳಿ ಮಾಡಿದೆ. ನಾವು ಇದನ್ನು ಖಂಡಿಸುತ್ತೇವೆ. ಸರಿಯಾದ ಪ್ರತ್ಯುತ್ತರವನ್ನೂ ನೀಡುತ್ತೇವೆ” ಎಂದು ಪಾಕಿಸ್ತಾನದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್ ಡೈರೆಕ್ಟರ್ ಜನರಲ್ ಜ. ಅಹ್ಮದ್ ಶರೀಫ್ ಚೌಧರಿ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು. ಇದಾದ ಬಳಿಕ, ನಾವು ಪ್ರತ್ಯುತ್ತರ ನೀಡದೆ ಬಿಡುವುದಿಲ್ಲ. ಉಗ್ರರು ಎಲ್ಲಿ ಅಡಗಿದ್ದರೂ ನಿರ್ನಾಮ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಅದರಂತೆ ಈಗ ಭಾರತೀಯ ಸೇನೆಯು ಪ್ರತೀಕಾರ ತೀರಿಸಿಕೊಂಡಿದೆ.