ನವದೆಹಲಿ: 1947ರಲ್ಲಿ ಭಾರತ-ಪಾಕಿಸ್ತಾನದ ವಿಭಜನೆಯ ನಂತರ ಕಾಶ್ಮೀರದ ಮೊದಲ ಭಯೋತ್ಪಾದಕ ದಾಳಿ ನಡೆದಾಗಲೇ ಉಗ್ರರಿಗೆ ತಕ್ಕ ಬುದ್ಧಿ ಕಲಿಸಬೇಕಾಗಿತ್ತು. ಅಲ್ಲಿಂದ ಶುರುವಾದ ಉಗ್ರವಾದವೇ ಇಂದೂ ಭಾರತವನ್ನು ಕಾಡುತ್ತಿರುವುದು. ಅಂದು ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಂಡಿದ್ದರೆ ಇಂದು ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.
ಗುಜರಾತ್ನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಇಂದು ಮಾತನಾಡಿದ ಅವರು, ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಭಾರತದ ಕಠಿಣ ನಿಲುವನ್ನು ಒತ್ತಿಹೇಳುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಸರ್ದಾರ್ ಪಟೇಲ್ರ ಪಾತ್ರದ ಬಗ್ಗೆ ಉಲ್ಲೇಖ
ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ರಾಷ್ಟ್ರೀಯ ಏಕೀಕರಣದ ಕೊಡುಗೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಳ್ಳುವವರೆಗೂ ಪಾಕಿಸ್ತಾನದ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಬಾರದು ಎಂದು ವಾದಿಸಿದ್ದರು. ಆದರೆ, ಅವರ ಮಾತುಗಳು ಹಾಗೂ ಸಲಹೆಗಳನ್ನು ಅಂದಿನ ಕಾಂಗ್ರೆಸ್ ಸರ್ಕಾರ ಕಿವಿಗೆ ಹಾಕಿಕೊಳ್ಳಲಿಲ್ಲ ಎಂದೂ ಮೋದಿ ಆರೋಪಿಸಿದ್ದಾರೆ.
1947ರಲ್ಲಿ ಭಾರತೆ ಮಾತೆಯನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಯಿತು. ಅದೇ ದಿನ ರಾತ್ರಿ ಕಾಶ್ಮೀರದ ಮಣ್ಣಲ್ಲಿ ಮೊದಲ ಭಯೋತ್ಪಾದನಾ ದಾಳಿ ನಡೆಯಿತು. ಭಾರತಾಂಬೆಯ ಒಂದು ಭಾಗವನ್ನು ಮುಜಾಹಿದೀನ್ ಹೆಸರಿನಲ್ಲಿ ಒತ್ತಾಯಪೂರ್ವಕವಾಗಿ ಕಿತ್ತುಕೊಳ್ಳಲಾಯಿತು. ಆ ದಿನವೇ ಮುಜಾಹಿದೀನ್ ಗಳೆಂದು ಕರೆದುಕೊಂಡವರನ್ನು ಮಣ್ಣು ಮುಕ್ಕಿಸಬೇಕಾಗಿತ್ತು. ಪಿಒಕೆಯನ್ನು ಮರಳಿ ಭಾರತದ ವಶಕ್ಕೆ ಪಡೆಯುವವರೆಗೂ ಸೇನೆಯು ಕಾರ್ಯಾಚರಣೆ ನಿಲ್ಲಿಸಬಾರದು ಎನ್ನುವುದು ಸರ್ದಾರ್ ಪಟೇಲ್ ಅವರ ಇಚ್ಛೆಯಾಗಿತ್ತು. ಆದರೆ, ಅವರ ಮಾತುಗಳನ್ನು ನಿರ್ಲಕ್ಷಿಸಲಾಯಿತು ಎಂದೂ ಮೋದಿ ಹೇಳಿದ್ದಾರೆ.
ಅಂದು ಆರಂಭವಾದ ಈ ಮುಜಾಹಿದೀನ್ಗಳ ರಕ್ತದೋಕುಳಿಯು ಕಳೆದ 75 ವರ್ಷಗಳಿಂದಲೂ ಮುಂದುವರಿಯುತ್ತಿದೆ. ಪಹಲ್ಗಾಮ್ನಲ್ಲಿ ಮೊನ್ನೆ ನಡೆದಿದ್ದು ಇದರ ಇನ್ನೊಂದು ರೂಪ. ಆದರೆ ಭಾರತೀಯ ಸೇನೆಯು ಪಾಕಿಸ್ತಾನವನ್ನು ಪ್ರತಿ ಬಾರಿಯೂ ಸೋಲಿಸಿದೆ. ಭಾರತದ ಮುಂದೆ ಜಯಿಸಲು ಸಾಧ್ಯವಿಲ್ಲ ಎನ್ನುವುದು ಪಾಕಿಸ್ತಾನಕ್ಕೂ ಈಗ ಅರ್ಥವಾಗಿದೆ ಎಂದಿದ್ದಾರೆ ಮೋದಿ.
ಅಲ್ಲದೇ, ಭಾರತದ ವಿರುದ್ಧದ ಭಯೋತ್ಪಾದನಾ ಚಟುವಟಿಕೆಗಳು ಕೇವಲ ಉಗ್ರರು ನಡೆಸುತ್ತಿರುವ ಪರೋಕ್ಷ ಯುದ್ಧವಲ್ಲ, ಅದು ಪಾಕಿಸ್ತಾನವೇ ನಡೆಸುತ್ತಿರುವ ವ್ಯವಸ್ಥಿತ ಯುದ್ಧ ಎಂದೂ ಮೋದಿ ಹೇಳಿದ್ದಾರೆ.