ನವದೆಹಲಿ : 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಗುರುವಾರ ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಟೀಂ ಇಂಡಿಯಾದ ಅಭ್ಯಾಸ ಅವಧಿಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಕಂಡುಬಂದಿವೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರೆ, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಂಜು ಸ್ಯಾಮ್ಸನ್ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಆಸ್ಪತ್ರೆ ಸೇರಿದ ಅಭಿಷೇಕ್ ಶರ್ಮಾ
ಅಮೆರಿಕ ವಿರುದ್ಧದ ಆರಂಭಿಕ ಪಂದ್ಯದ ವೇಳೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲಿದ್ದ ಅಭಿಷೇಕ್ ಶರ್ಮಾ, ಮಂಗಳವಾರದ ಅಭ್ಯಾಸ ಅವಧಿಯಲ್ಲಿ ಪಾಲ್ಗೊಳ್ಳಲಿಲ್ಲ. ಮೂಲಗಳ ಪ್ರಕಾರ, ಅನಾರೋಗ್ಯ ಉಲ್ಬಣಗೊಂಡಿದ್ದರಿಂದ ಅವರನ್ನು ಸೋಮವಾರವೇ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಗುರುವಾರ ನಡೆಯುವ ಪಂದ್ಯಕ್ಕೆ ಅವರು ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಪಾಕಿಸ್ತಾನದ ವಿರುದ್ಧದ ಮಹತ್ವದ ಪಂದ್ಯ ಭಾನುವಾರ ಇರುವುದರಿಂದ, ಟೀಂ ಮ್ಯಾನೇಜ್ಮೆಂಟ್ ಅಭಿಷೇಕ್ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸುತ್ತಿಲ್ಲ.
ಇಶಾನ್ ಮತ್ತು ಸಂಜು: ಭಾರಿ ವ್ಯತ್ಯಾಸ
ಅಭಿಷೇಕ್ ಅಲಭ್ಯತೆಯಿಂದಾಗಿ ತೆರವಾಗಬಹುದಾದ ಸ್ಥಾನಕ್ಕಾಗಿ ಅಥವಾ ಭವಿಷ್ಯದ ಅವಕಾಶಕ್ಕಾಗಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅಕ್ಕಪಕ್ಕದ ನೆಟ್ಸ್ನಲ್ಲಿ ಅಭ್ಯಾಸ ನಡೆಸಿದರು. ಆದರೆ ಇವರಿಬ್ಬರ ಬ್ಯಾಟಿಂಗ್ನಲ್ಲಿ ಸ್ಪಷ್ಟವಾದ ವ್ಯತ್ಯಾಸ ಎದ್ದು ಕಾಣುತ್ತಿತ್ತು. ಇಶಾನ್ ಕಿಶನ್ ಆತ್ಮವಿಶ್ವಾಸದಿಂದ ಚೆಂಡನ್ನು ಬೌಂಡರಿಗಟ್ಟುತ್ತಿದ್ದರೆ, ಸಂಜು ಸ್ಯಾಮ್ಸನ್ ಲಯ ಕಂಡುಕೊಳ್ಳಲು ಪರದಾಡುತ್ತಿದ್ದರು.
ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವೇಗದ ಬೌಲಿಂಗ್ ಎದುರು ಸಂಜು ಹಿಂಜರಿಯುತ್ತಿರುವುದು ಕಂಡುಬಂತು. ಅವರ ಬ್ಯಾಟಿಂಗ್ನಲ್ಲಿ ಸಹಜವಾದ ಶೈಲಿ ಮಾಯವಾಗಿತ್ತು. ನಂತರ ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರನ್ನು ಎದುರಿಸುವಾಗ ಸಂಜು ಚೇತರಿಸಿಕೊಂಡರಾದರೂ, ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಒತ್ತಡ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇನ್ನೊಂದೆಡೆ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಡ್ರಿಲ್ಸ್ ಕೂಡ ನಡೆಸಿದ್ದು, ಗುರುವಾರ ಅವರೇ ಕೀಪಿಂಗ್ ಜವಾಬ್ದಾರಿ ಮತ್ತು ಆರಂಭಿಕನ ಸ್ಥಾನ ನಿರ್ವಹಿಸುವ ಸಾಧ್ಯತೆಯಿದೆ.
ಸಹಾಯಕ ಕೋಚ್ ಹೇಳಿದ್ದೇನು?
ಸಂಜು ಸ್ಯಾಮ್ಸನ್ ಅವರ ಪ್ರಸ್ತುತ ಸ್ಥಿತಿಯ ಬಗ್ಗೆ ಭಾರತದ ಸಹಾಯಕ ಕೋಚ್ ರಿಯಾನ್ ಟೆನ್ ಡೋಶೇಟ್ ಮುಕ್ತವಾಗಿ ಮಾತನಾಡಿದ್ದಾರೆ. “ಈ ಹಂತದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಮುಖ್ಯ. ನಾವು ಸಂಜುಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಿದ್ದೆವು. ಆದರೆ ಬೇರೊಬ್ಬರು ಬಂದು ಅವರಿಗಿಂತ ಉತ್ತಮ ಪ್ರದರ್ಶನ ನೀಡಿದಾಗ, ಆಯ್ಕೆ ಪ್ರಕ್ರಿಯೆ ಸ್ಪಷ್ಟವಾಗುತ್ತದೆ. ಆದರೂ ಸಂಜು ಅವರ ಧೋರಣೆ ಅತ್ಯುತ್ತಮವಾಗಿದೆ. ಅವರು ತಂಡದ ಪಾಸಿಟಿವ್ ಶಕ್ತಿಯಾಗಿದ್ದಾರೆ,” ಎಂದು ಕೋಚ್ ಹೇಳಿದ್ದಾರೆ.
ಸಂಜುಗೆ ವಿಶೇಷ ತರಬೇತಿ
ಮುಖ್ಯ ಅಭ್ಯಾಸ ಅವಧಿ ಮುಗಿದ ನಂತರವೂ ಸಂಜು ಸ್ಯಾಮ್ಸನ್ ಮೈದಾನ ಬಿಡಲಿಲ್ಲ. ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಪ್ರತ್ಯೇಕವಾಗಿ ‘ಥ್ರೋಡೌನ್’ ಅಭ್ಯಾಸ ನಡೆಸಿದರು. ಈ ವೇಳೆ ಇಬ್ಬರ ನಡುವೆ ಗಂಭೀರ ಚರ್ಚೆ ನಡೆಯಿತು. ಅಭ್ಯಾಸದ ಕೊನೆಯಲ್ಲಿ ಕೋಚ್, ಸಂಜು ಅವರನ್ನು ಅಪ್ಪಿಕೊಂಡು ಬೆನ್ನು ತಟ್ಟಿ ಹುರಿದುಂಬಿಸಿದರು. ಮೈದಾನದಲ್ಲಿ ಉಳಿದ ಆಟಗಾರರು ಲವಲವಿಕೆಯಿಂದ ಇದ್ದರೆ, ಸಂಜು ಮಾತ್ರ ಒಬ್ಬಂಟಿಯಾಗಿ ನಿಂತು ದೀರ್ಘಾಲೋಚನೆಯಲ್ಲಿ ಮುಳುಗಿದ್ದ ದೃಶ್ಯ ಕಂಡುಬಂತು.
ಬೂಮ್ರಾ ಕಂಬ್ಯಾಕ್, ಹಾರ್ದಿಕ್ ಅಬ್ಬರ
ಇನ್ನುಳಿದಂತೆ ಗಾಯದಿಂದ ಚೇತರಿಸಿಕೊಂಡಿರುವ ವಾಷಿಂಗ್ಟನ್ ಸುಂದರ್ ಬೌಲಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬೂಮ್ರಾ, ಪೂರ್ಣ ಪ್ರಮಾಣದ ಬೌಲಿಂಗ್ ನಡೆಸಿದ್ದು, ಮೊಹಮ್ಮದ್ ಸಿರಾಜ್ ಬದಲಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ನೆಟ್ಸ್ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ತಮ್ಮ ‘ಪವರ್ ಹಿಟ್ಟಿಂಗ್’ ಪ್ರದರ್ಶಿಸಿದರು. ಹಾರ್ದಿಕ್ ಬಾರಿಸಿದ ಹಲವು ಚೆಂಡುಗಳು ಸ್ಟ್ಯಾಂಡ್ಸ್ ಸೇರಿದರೆ, ದುಬೆ ಸ್ಪಿನ್ನರ್ಗಳ ವಿರುದ್ಧ ಅಬ್ಬರಿಸಿದರು.
ಇದನ್ನೂ ಓದಿ : ಬೆಂಗಳೂರಲ್ಲಿ ಮನಕಲಕುವ ಘಟನೆ.. ಸ್ಕೂಲ್ ಬಸ್ ಹರಿದು ಸ್ಥಳದಲ್ಲೇ ಪ್ರಾಣ ಬಿಟ್ಟ ಕಂದಮ್ಮಗಳು!



















