ಬೆಂಗಳೂರು : ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ನಿರ್ಣಾಯಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 72 ರನ್ಗಳ ಬೃಹತ್ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ ತನ್ನ ಸೆಮಿಫೈನಲ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ, ಜಿಂಬಾಬ್ವೆಯನ್ನು ಮಣಿಸಿ ಟೂರ್ನಿಯಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದರೆ, ಜಿಂಬಾಬ್ವೆ ಟೂರ್ನಿಯಿಂದಲೇ ಹೊರಬಿದ್ದಿದೆ. ಇದೀಗ ‘ಗ್ರೂಪ್ 1’ರಲ್ಲಿ ಸೆಮಿಫೈನಲ್ನ ಉಳಿದೊಂದು ಸ್ಥಾನಕ್ಕಾಗಿ ಕೇವಲ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಭಾರತದ ಎದುರು ಬೃಹತ್ ಮೊತ್ತದ ದಾಖಲೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಜಿಂಬಾಬ್ವೆ ಬೌಲರ್ಗಳನ್ನು ಬೆಂಡೆತ್ತಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 256 ರನ್ಗಳ ದೈತ್ಯ ಮೊತ್ತ ಕಲೆಹಾಕಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಗರಿಷ್ಠ ಸ್ಕೋರ್ ಹಾಗೂ ಟೂರ್ನಿಯ ಇತಿಹಾಸದಲ್ಲಿಯೇ ಎರಡನೇ ಗರಿಷ್ಠ ಸ್ಕೋರ್ ಎಂಬ ದಾಖಲೆಗೆ ಪಾತ್ರವಾಯಿತು. ಆರಂಭಿಕ ಅಭಿಷೇಕ್ ಶರ್ಮಾ (30 ಎಸೆತಗಳಲ್ಲಿ 55 ರನ್) ಬಿರುಸಿನ ಅರ್ಧಶತಕ ಸಿಡಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (33) ಉಪಯುಕ್ತ ಕಾಣಿಕೆ ನೀಡಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಕೇವಲ 23 ಎಸೆತಗಳಲ್ಲಿ ಅಜೇಯ 50 ರನ್ ಚಚ್ಚಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ತಿಲಕ್ ವರ್ಮಾ ಕೇವಲ 16 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಬ್ರಿಯಾನ್ ಬೆನೆಟ್ ಅವರ ಏಕಾಂಗಿ ಹೋರಾಟದ (59 ಎಸೆತಗಳಲ್ಲಿ ಅಜೇಯ 97 ರನ್) ಹೊರತಾಗಿಯೂ, 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ಅರ್ಷದೀಪ್ ಸಿಂಗ್ (3/24) ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಎಂಬ ನೂತನ ಮೈಲಿಗಲ್ಲು ಸ್ಥಾಪಿಸಿದರು.
ಮಾರ್ಚ್ 1ರಂದು ಹೈವೋಲ್ಟೇಜ್ ಕದನ
ಭಾನುವಾರ, ಮಾರ್ಚ್ 1ರಂದು ‘ಗ್ರೂಪ್ 1’ರಲ್ಲಿ ಎರಡು ಪಂದ್ಯಗಳು ನಿಗದಿಯಾಗಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಕೇವಲ ಔಪಚಾರಿಕವಾಗಿದೆ. ಆದರೆ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಹಣಾಹಣಿಯು ಅತ್ಯಂತ ನಿರ್ಣಾಯಕವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನಿಂದಾಗಿ -3.800ಗೆ ಕುಸಿದಿದ್ದ ಭಾರತದ ನೆಟ್ ರನ್ ರೇಟ್, ಜಿಂಬಾಬ್ವೆ ವಿರುದ್ಧದ ಜಯದ ಬಳಿಕ -0.100ಗೆ ಸುಧಾರಿಸಿದೆ. ಹಾಗಾದರೆ, ಈ ಹೈವೋಲ್ಟೇಜ್ ಪಂದ್ಯದ ಫಲಿತಾಂಶದ ಮೇಲೆ ಭಾರತದ ಸೆಮಿಫೈನಲ್ ಭವಿಷ್ಯ ಹೇಗೆ ನಿರ್ಧಾರವಾಗಲಿದೆ? ಇಲ್ಲಿದೆ ಮೂರು ಪ್ರಮುಖ ಲೆಕ್ಕಾಚಾರ.
ಸನ್ನಿವೇಶ 1: ಭಾರತಕ್ಕೆ ಗೆಲುವೇ ಅಂತಿಮ
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಜಯಗಳಿಸಿದರೆ, ಯಾವುದೇ ಅಡ್ಡಿಯಿಲ್ಲದೆ ನೇರವಾಗಿ ಸೆಮಿಫೈನಲ್ಗೆ ಲಗ್ಗೆಯಿಡಲಿದೆ. ಈ ಗೆಲುವಿನೊಂದಿಗೆ ಸೂಪರ್ 8 ಹಂತದ ಮೂರು ಪಂದ್ಯಗಳಿಂದ ಒಟ್ಟು ನಾಲ್ಕು ಅಂಕಗಳನ್ನು ಗಳಿಸಿ ಟೀಮ್ ಇಂಡಿಯಾ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.
ಸನ್ನಿವೇಶ 2: ಸೋತರೆ ಟೂರ್ನಿಯಿಂದಲೇ ಔಟ್
ಒಂದು ವೇಳೆ ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಕದನದಲ್ಲಿ ಭಾರತ ಪರಾಭವಗೊಂಡರೆ, ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಈ ಸನ್ನಿವೇಶದಲ್ಲಿ ವೆಸ್ಟ್ ಇಂಡೀಸ್ ತಂಡವು ನಾಲ್ಕು ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ.
ಸನ್ನಿವೇಶ 3: ಮಳೆ ಬಂದು ಪಂದ್ಯ ರದ್ದಾದರೆ?
ಕೋಲ್ಕತ್ತಾದಲ್ಲಿ ಮಳೆಯ ಆಟ ನಡೆದು ಪಂದ್ಯ ರದ್ದಾದರೆ (No-result), ಭಾರತದ ಪಾಲಿಗೆ ಇದು ಮಾರಕವಾಗಲಿದೆ. ಈ ಪರಿಸ್ಥಿತಿಯಲ್ಲಿ ಎರಡೂ ತಂಡಗಳು ತಲಾ ಮೂರು ಅಂಕಗಳನ್ನು ಹಂಚಿಕೊಳ್ಳಲಿವೆ. ಆದರೆ, ವೆಸ್ಟ್ ಇಂಡೀಸ್ ತಂಡವು +1.791ರ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವುದರಿಂದ, ರನ್ ರೇಟ್ ಆಧಾರದ ಮೇಲೆ ಕೆರಿಬಿಯನ್ ಪಡೆ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಒಟ್ಟಾರೆಯಾಗಿ, ಭಾನುವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ (Knockout) ಪಂದ್ಯವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ : ಹಟ್ಟಿ ಚಿನ್ನದ ಗಣಿ ಮುಖ್ಯದ್ವಾರದ ಬಳಿ 15ಕ್ಕೂ ಹೆಚ್ಚು ಸ್ಫೋಟಕಗಳು ಪತ್ತೆ



















