ಬೆಂಗಳೂರು : ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಯಮಗಳನ್ನು ನೀಡಿದೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕು. ಸುಪ್ರೀಂ ಕೋರ್ಟ್ ನಾಯಿಗಳನ್ನು ಕೊಲ್ಲಲು ಹೇಳಿಲ್ಲ. ನಾಯಿಗಳನ್ನ ಸುರಕ್ಷಿತ ಜಾಗದಲ್ಲಿ ಹಾಕಬೇಕು ಎಂದು ಹೇಳಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೆಹಲಿಗೆ ಮಾತ್ರ ಸೀಮಿತವಾಗದೆ, ಎಲ್ಲೆಡೆ ಅಳವಡಿಸಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ವರದಿಗಾರರಿಗೆ ಸ್ಪಂದಿಸಿದ ಡಾ. ಭರತ್, ಒಮ್ಮೆ ಸುರಕ್ಷಿತ ಜಾಗಕ್ಕೆ ಬೀದಿ ನಾಯಿಗಳನ್ನು ಹಾಕಿದ ಮೇಲೆ ಮತ್ತೆ ಈಚೆಗೆ ಬರದಂತೆ ಕ್ರಮ ವಹಿಸಿಕೊಳ್ಳಬೇಕು. ರೇಬಿಸ್ ಬಂದಿರುವ ನಾಯಿಗಳು ಹಾಗೂ ಬೀದಿ ನಾಯಿಗಳು ಕಚ್ಚಿ ಅನೇಕರ ಪ್ರಾಣಹಾನಿಯಾಗಿದೆ ಎಂದಿದ್ದಾರೆ.
ಬೀದಿ ನಾಯಿಗಳು ದಾಳಿ ಮಾಡುವ ದೃಶ್ಯಗಳನ್ನು ನೋಡಿದ್ದೇವೆ. ಹಾಗೆಂದ ಮಾತ್ರಕ್ಕೆ ನಾಯಿಗಳನ್ನು ಕೊಲ್ಲಲು ಹೇಳುತ್ತಿಲ್ಲ. ಎಲ್ಲಾ ಬೀದಿ ನಾಯಿಗಳನ್ನು ಸುರಕ್ಷಿತವಾಗಿ ಒಂದು ಕಡೆ ಕೂಡಿ ಹಾಕಬೇಕಿದೆ. ಬಿರಿಯಾನಿ ಹಾಕಿದರೇ ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತದೆ ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ನಯವಾಗಿ ಟೀಕಿಸಿದ್ದಾರೆ.



















