ನವದೆಹಲಿ: ಚುನಾವಣೆ ನಡೆಯಲಿರುವ ಬಿಹಾರ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಬೇಕೆಂಬ ಭಾರತೀಯ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಜುಲೈ 10 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರ್ಧರಿಸಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಜೊಯ್ಮಲ್ಯ ಬಾಗ್ಚಿ ಅವರಿದ್ದ ಪೀಠದೆದುರು, ರಾಜ್ಯ ಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿದಾರರ ಪರವಾಗಿ ತುರ್ತು ವಿಚಾರಣೆಗೆ ಮನವಿ ಮಾಡಿದರು. ವಿಚಾರಣೆಯನ್ನು ಗುರುವಾರ (ಜುಲೈ 10ರಂದು) ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ಹೇಳಿದೆ.
ಪ್ರಕರಣವನ್ನು ಶೀಘ್ರ ವಿಚಾರಣೆಗೆ ಪಟ್ಟಿ ಮಾಡಬೇಕೆಂದು ಸಿಬಲ್ ಒತ್ತಾಯಿಸಿದರು. ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕುರಿತು ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಬಿಹಾರದ ಮಾಜಿ ಶಾಸಕ ಮುಜಾಹಿದ್ ಆಲಂ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಚುನಾವಣಾ ಆಯೋಗವು ದೇಶದಾದ್ಯಂತ ವಿಶೇಷ ಪರಿಷ್ಕರಣೆಗೆ ಆದೇಶಿಸಿದ್ದು, ಬಿಹಾರದಲ್ಲಿ ತಕ್ಷಣ ಜಾರಿಗೆ ತರಲಾಗಿದೆ.
ಬಿಹಾರದಲ್ಲಿ ಸುಮಾರು 8 ಕೋಟಿ ಮತದಾರರಿದ್ದು, ಸುಮಾರು 4 ಕೋಟಿ ಮತದಾರರು ಮರು ಪರಿಶೀಲನೆಗೆ ಒಳಗಾಗಬೇಕಾಗುತ್ತದೆ ಎಂದು ಸಿಂಘ್ವಿ ಗಮನ ಸೆಳೆದರು.
ಕಾಲಮಿತಿ ಎಷ್ಟು ಕಟ್ಟುನಿಟ್ಟಾಗಿದೆಯೆಂದರೆ, ಜುಲೈ 25 ರೊಳಗೆ ನೀವು ದಾಖಲೆಗಳನ್ನು ಸಲ್ಲಿಸದಿದ್ದರೆ, ನಿಮ್ಮನ್ನು ಹೊರಗಿಡಲಾಗುತ್ತದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ಸಂಪೂರ್ಣ ಪರಿಷ್ಕರಣೆಗೆ ಚುನಾವಣಾ ಆಯೋಗದ ನಿರ್ದೇಶನವನ್ನು ಪ್ರಶ್ನಿಸಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸರ್ಕಾರೇತರ ಸಂಸ್ಥೆ ಕೂಡ ಅರ್ಜಿ ಸಲ್ಲಿಸಿದೆ. ಜೂನ್ 24 ರಂದು ಚುನಾವಣಾ ಆಯೋಗವು ಅನರ್ಹ ಹೆಸರುಗಳನ್ನು ತೆಗೆದುಹಾಕಿ ಮತ್ತು ಅರ್ಹ ನಾಗರಿಕರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರಿಸುವ ಉದ್ದೇಶದಿಂದ ಬಿಹಾರದಲ್ಲಿ ಎಸ್ಐಆರ್ ನಡೆಸಲು ನಿರ್ದೇಶನಗಳನ್ನು ನೀಡಿತ್ತು.
ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್ಐಆರ್) ಕೈಗೊಳ್ಳುವ ಚುನಾವಣ ಆಯೋಗದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಆಯೋಗ ಈ ಆದೇಶವನ್ನು ಪ್ರಶ್ನಿಸಿ ಲಾಲು ನೇತೃತ್ವದ ಆರ್ಜೆಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಬಿಹಾರದಲ್ಲಿ SIR ಅನ್ನು ಪ್ರಾರಂಭಿಸುವ ECI ಯ ಜೂನ್ 24, 2025 ರ ಆದೇಶವನ್ನು ರದ್ದುಗೊಳಿಸಲು ಅರ್ಜಿದಾರರು ನಿರ್ದೇಶನವನ್ನು ಕೋರುತ್ತಿದ್ದಾರೆ.
ಬಿಹಾರದ ನಂತರ, ಚುನಾವಣಾ ಸಮಿತಿಯು ಈಗ ಬಂಗಾಳ, ದೆಹಲಿಯಲ್ಲಿ ಪಟ್ಟಿಗಳ ಪರಿಷ್ಕರಣೆಯನ್ನು ಯೋಜಿಸುತ್ತಿದೆ, ಸ್ವಯಂ ಸೇವಾ ಸಂಸ್ಥೆಗಳಾದ ಎಡಿಆರ್, ಪಿಯುಸಿಎಲ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ, ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್ ಸೇರಿ ಹಲವರು ಆಯೋಗದ ಕ್ರಮವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಲಕ್ಷಾಂತರ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ಇದು ಎಂದು ಎಡಿಆರ್ ಆತಂಕ ವ್ಯಕ್ತಪಡಿಸಿದೆ.
ಜೂನ್ 24ರಂದು ಆಯೋಗ ಹೊರಡಿಸಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಆದೇಶ ಸಂವಿಧಾನದ 14, 19(1)(ಎ), 21, 325, 328ರ ವಿಧಿ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ–1950, ಮತದಾರ ನೋಂದಣಿ ನಿಯಮ–1960ರ ಉಲ್ಲಂಘನೆಯಾಗಿದೆ. ಹೀಗಾಗಿ ಆದೇಶವನ್ನು ವಜಾ ಮಾಡುವಂತೆ ಮಹುವಾ ಕೋರಿದ್ದಾರೆ.