ಬೆಂಗಳೂರು : ಅಪರಾಧಿ ನಾನಲ್ಲ, ಅಪರಾಧ ಎನಗಿಲ್ಲ ಎನ್ನುವ ಹಳೇ ಡಾ.ವಿಷ್ಣುವರ್ಧನ್ ಹಾಡನ್ನ ಕೋರ್ಟ್ ನಲ್ಲಿ ದರ್ಶನ್ ಗುನುಗುತ್ತಿದ್ದಾರೆ. ಕೋರ್ಟ್ ದೋಷಾರೋಪಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಆರೋಪಿಗಳೆಲ್ಲರೂ ಸುಳ್ಳು ಸುಳ್ಳು ಅಂತ ಕಿರುಚಿದ್ದಾರೆ. ಆದರೆ ಸಾಕ್ಷಿಗಳ ವಿಚಾರಣೆ ಬಿಸಿ ಮಾತ್ರ ದರ್ಶನ್ ಮತ್ತು ಗ್ಯಾಂಗ್ ಗೆ ಮುಂದಿನ ಸಮಯ ಚೆನ್ನಾಗಿಲ್ಲ ಎಂಬ ಇನ್ ಡೈರೆಕ್ಟ್ ಸೂಚನೆ ನೀಡಿದೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಗ್ಯಾಂಗ್ ಜಾಮೀನನ್ನ ಸುಪ್ರೀಂಕೋರ್ಟ್ ಕ್ಯಾನ್ಸಲ್ ಮಾಡಿತು. ಆಚೆ ರಾಜಾರೋಷವಾಗಿ ತಿರುಗುತ್ತಿದ್ದ ದರ್ಶನ್ ಮತ್ತೆ ಪರಪ್ಪನ ಅಗ್ರಹಾರದ ಅತಿಥಿಯಾಗೋಹಂಗಾಯ್ತು. ಈಗ ಆರೋಪ ಒಪ್ಪಿಕೊಂಡ್ರು ಜೈಲೇ ಒಪ್ಪದೇ ಇದ್ರೂ ಜೈಲೇ ಎನ್ನುವ ಅಡ್ಡಕತ್ತರಿ ಪರಿಸ್ಥಿತಿ ಡಿ ಗ್ಯಾಂಗ್ ನಿದ್ರೆ ಕೆಡಿಸಿಬಿಟ್ಟಿದೆ. ನ್ಯಾಯಾಧೀಶರ ವಿಚಾರಣೆ ರೆಡಿಯಿದ್ದರೂ, ಪೊಲೀಸರು ಸಿದ್ಧರಿರಲಿಲ್ಲ. ಅಲ್ಲದೇ ಆರೋಪಿಗಳಿಗೆ ಚಾರ್ಜ್ ಫ್ರೇಮ್ ಬಗ್ಗೆ ಮನವರಿಕೆ ಮಾಡುವುದಕ್ಕೆ ಕಾಲಾವಕಾಶ ಬೇಕೆಂದು ವಕೀಲರು ಕೇಳಿದ್ರು. ವಕೀಲರು ಜೈಲಿಗೆ ಹೋಗಿ ಸಲಹೆಯನ್ನು ನೀಡುವ ಅವಕಾಶವಿತ್ತು. ಅದನ್ನು ಈಗಾಗಲೇ ವಕೀಲರು ಮಾಡಿದ್ದಾರೆ. ಈ ಕಾರಣಕ್ಕಾಗಿ ಚಾರ್ಜ್ ಫ್ರೇಮ್ ಮಾಡುವುದಕ್ಕೆ ದಿನವನ್ನ ನಿಗದಿ ಪಡಿಸಲಾಯ್ತು.
ಕೋರ್ಟ್ ವಿಚಾರಣೆ ‘ಡೇಟ್ ಫಾರ್ ಟ್ರಯಲ್’ ನ.10ಕ್ಕೆ ಮುಂದೂಡಿಕೆಯಾಗಿದೆ. ದರ್ಶನ್ ಕೇಸ್ ನಲ್ಲಿ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆಯು ಇನ್ನೂ ಕಂಪ್ಲೀಟ್ ಆಗಿಲ್ಲ. ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿರೋ ತಾಂತ್ರಿಕ ಸಾಕ್ಷಿಗಳು ದರ್ಶನ್ & ಗ್ಯಾಂಗ್ ಗೆ ಮತ್ತಷ್ಟು ತಲೆನೋವು ತಂದ್ರೂ ಆಶ್ಚರ್ಯ ಪಡಬೇಕಿಲ್ಲ. ಸಾಕ್ಷಿ ವಿಚಾರಣೆಯಾಗೋವರೆಗೂ ದರ್ಶನ್ ಭವಿಷ್ಯ ನಿರ್ಧಾರವಾಗಲ್ಲ. ಜೀವವಧಿ ಶಿಕ್ಷೆ ವಿಧಿಸೋಕೆ ಅವಕಾಶವಿರೋ ಕೊಲೆ ಪ್ರಕರಣವಾಗಿರುವುದರಿಂದ, ಜಾಮೀನು ಸಿಗುವ ಚಾನ್ಸ್ ಬಹಳ ಕಡಿಮೆ ಇದೆ. ಪಾಟಿಸವಾಲಿಗೂ ತಿಂಗಳುಗಟ್ಟಲೆ ಟೈಮ್ ಹಿಡಿಯೋ ಸಾಧ್ಯತೆಗಳಿವೆ. FSL ವರದಿಗೂ, ಆರೋಪಿಗಳ ನಿರಾಕರಣೆಗೂ ಅಜಗಜಾಂತರ ವ್ಯತ್ಯಾಸವಿರೋದು ಇನ್ನಷ್ಟು ಕೇಸ್ ಪ್ರೊಸಿಜರ್ ನ್ನ ಮುಂದೆ ಹಾಕುತ್ತೆ.
ದರ್ಶನ್ ತಮ್ಮ ವಕೀಲರನ್ನ ಬದಲಾಯಿಸಲು ಹೆಣಗಾಡುತ್ತಿದ್ರೆ, ಇತ್ತ ಪವಿತ್ರಾಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ಗೆ ಆದೇಶ ಪರಿಶೀಲಿಸುವಂತೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಒಟ್ನಲ್ಲಿ ದರ್ಶನ್ & ಗ್ಯಾಂಗ್ ಜಾಮೀನು ಸಿಗೋ ಆ ದೂರದ ಬೆಳಕು ನಿಧಾನವಾಗಿ ಮಾಯವಾಗುತ್ತಿದೆ. ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ವಾದಮಂಡನೆ ಆಲಿಸೋ ಕೋರ್ಟ್ ಅಂತಿಮವಾಗಿ ತೀರ್ಪು ಪ್ರಕಟಿಸೋಕೆ ಸಮಯ ಹಿಡಿಯುತ್ತೆ. ಹೊರಗಡೆ ಡೆವಿಲ್ ರಿಲೀಸ್ ಗಾದ್ರೂ ಡಿ ಬಾಸ್ ಆಚೆ ಇರ್ತಾರೆ ಎಂಬ ಕಾಯುವಿಕೆಗೆ ತಣ್ಣೀರು ಎರಚಿದಂತಾಗಿದೆ. ದರ್ಶನ್ ಇಲ್ಲದೇ ಅಂದು ಸಾರಥಿ ಬಿಡುಗಡೆಯಾಗಿತ್ತು. ಇಂದು ಡೆವಿಲ್ ಸರದಿ..! ಸಿನಿಮಾ ಪ್ರಚಾರಗಳಲ್ಲಿ ದರ್ಶನ್ ಭಾಗವಹಿಸದೇ ಇರೋದು ಚಿತ್ರತಂಡದ ಪ್ರಮೋಷನ್ ಕೆಲಸಗಳಿಗೆ ದೊಡ್ಡ ಹೊಡೆತ. ‘ಡೆವಿಲ್’ ರಿಲೀಸ್ ಪಕ್ಕಕ್ಕಿರಲಿ, ದರ್ಶನ್ ಜೈಲುವಾಸ ಎಲ್ಲಿವರೆಗೂ ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಯಾವ ಕ್ಲಾರಿಟಿಯೂ ಇಲ್ಲ. ಇದನ್ನೂ ಓದಿ : ಭಕ್ತಾದಿಗಳೇ ಎಚ್ಚರ… ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ | ಪ್ರಕರಣ ದಾಖಲು



















