ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಹಲವಾರು ಆರೋಪಗಳನ್ನು ಮಾಡುತ್ತಿವೆ. ಈ ಮಧ್ಯೆ ರಾಜ್ಯ ಸರ್ಕಾರ ಕೂಡ ವಿಪಕ್ಷಗಳು ಆಡಳಿತದಲ್ಲಿದ್ದ ಸಂದರ್ಭದಲ್ಲಿನ ಹಗರಣಗಳು ಹೊರಗೆಡವಲು ಯತ್ನಿಸುತ್ತಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿತ್ತು. ಈಗ ಹಗರಣದ ಹಿಂದೆ ಬಿದ್ದಿದೆ.
ಈಗ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯ ಮೂರ್ತಿ ಮೈಕಲ್ ಕುನ್ಹಾ ವರದಿ ಅಧಾರಿಸಿ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಿದ್ದ 8 ಜನ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಕೋವಿಡ್ ಸಂದರ್ಭದಲ್ಲಿ ನಡೆದ ಕೋಟ್ಯಂತರ ರೂ. ಹಣದ ಹಗರಣವಾಗಿದೆ ಎಂದು ಸರ್ಕಾರ ರಚಿಸಿರುವ ಆಯೋಗ, ವರದಿ ನೀಡಿದೆ. ಸರ್ಕಾರಕ್ಕೆ ಮೈಕಲ್ ಡಿ.ಕುನಾ ಆಯೋಗ ಮಧ್ಯಂತರ ವರದಿ ನೀಡಿದೆ. ವರದಿಯಲ್ಲಿ ಕೋವಿಡ್ ನಿರ್ವಹಣೆ ವೇಳೆ ವೆಚ್ಚದ ಬಗ್ಗೆ ಅನುಮಾನ, ಆಕ್ಷೇಪಣೆಗಳು ವ್ಯಕ್ತವಾಗಿತ್ತು. ಹೀಗಾಗಿ ಇವುಗಳಿಗೆ ಉತ್ತರ ನೀಡುವಂತೆ 8 ಜನ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಕೋವಿಡ್ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ್, ಮುಖ್ಯ ಅಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್, ಅನಿಲ್ ಕುಮಾರ್, ವಿಶೇಷ ಅಯುಕ್ತರಾಗಿದ್ದ ಡಿ. ರಂದೀಪ್, ರಾಜೇಂದ್ರ ಚೋಳನ್, ತುಳಸಿ ಮದ್ದಿನಿ, ರೆಡ್ಡಿ ಶಂಕರ್ ಬಾಬು, ಜಂಟಿ ಅಯುಕ್ತರಾಗಿದ್ದ ವೆಂಕಟಾಚಲಪತಿ ಸೇರಿದಂತೆ 8 ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಅಲ್ಲದೇ, ನೋಟಿಸ್ ಗೆ ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.



















