ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಕೇಸ್ಗೆ ಸಂಬಂಧಪಟ್ಟಂತೆ ಮಾನವ ಹಕ್ಕುಗಳ ಆಯೋಗ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಲು ಸಜ್ಜಾಗಿದೆ. ದುರಂತದಲ್ಲಿ ಮೃತಪಟ್ಟ ಆರ್ಸಿಬಿ ಅಭಿಮಾನಿಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಶಿಫಾರಸ್ಸಿನ ವರದಿ ಸಲ್ಲಿಸಲು ರೆಡಿ ಸಿದ್ಧತೆ ನಡೆಸಿದೆ.
ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದ ಹನ್ನೊಂದು ಮಂದಿ ಅಮಾಯಕರ ಸಾವಾಗಿದೆ. ಅಮಾಯಕ ಆರ್ಸಿಬಿ ಅಭಿಮಾನಿಗಳ ಸಾವಿಗೆ ಸರ್ಕಾರ ಕೂಡ ಜವಾಬ್ದಾರಿ ಹೊರಬೇಕಾಗತ್ತೆ. ಹೀಗಾಗಿ ಸರ್ಕಾರ ಘೋಷಿಸಿರುವ ಹತ್ತು ಲಕ್ಷ ಪರಿಹಾರ ಮೊತ್ತವನ್ನು 20 ಲಕ್ಷ ರೂ. ಗೆ ಏರಿಸುವಂತೆ ಶಿಫಾರಸ್ಸಿನ ವರದಿ ಸಲ್ಲಿಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ.
ಪರಿಹಾರದ ಮೊತ್ತ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲು ಮಾನವ ಹಕ್ಕುಗಳ ಆಯೋಗ ಕೆಲ ಮಾನದಂಡಗಳನ್ನು ಪಾಲಿಸುತ್ತಿದೆ. ಒಬ್ಬರೇ ಮಕ್ಕಳಿರುವ ಪೊಷಕರು ತಮ್ಮ ಕುಡಿ ಕಳೆದುಕೊಂಡಿದ್ದರೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಿದೆ. ಅಲ್ಲದೆ, ಮೃತಪಟ್ಟ ಅಭಿಮಾನಿ ಆ ಕುಟುಂಬಕ್ಕೆ ಆರ್ಥಿಕವಾಗಿ ಆಧಾರವಾಗಿದ್ದರೆ ಅವರಿಗೂ ಪರಿಹಾರ ಹೆಚ್ಚಿಸಲು ಸಲಹೆ ನೀಡಲಿದೆ.
ಜೊತೆಗೆ ಮೃತಪಟ್ಟವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಲ್ಲಿ ಅಂತಹ ಕುಟುಂಬಕ್ಕೂ ನೆರವಿನ ಹಸ್ತ ಚಾಚಲು ಶಿಫಾರಸ್ಸು ಮಾಡಲಿದೆ. ಸದ್ಯ ಕಾಲ್ತುಳಿತ ಕೇಸ್ ನಲ್ಲಿ ಎಂಟ್ರಿಯಾಗಿರುವ ಮಾನವ ಹಕ್ಕುಗಳ ಆಯೋಗ, ಸುಮೋಟೋ ಕೇಸ್ ದಾಖಲಿಸಿ ನೋಟಿಸ್ ನೀಡಿದೆ. ಆರೋಗ್ಯ ಇಲಾಖೆ ಸೆಕ್ರೆಟರಿ, ಕೆಎಸ್ ಸಿಎ ಆಡಳಿತ ಮಂಡಳಿ, ಪೊಲೀಸ್ ಕಮಿಷನರ್ ರಿಗೆ ವಿವರಣೆ ಕೊಡುವಂತೆ ನೋಟಿಸ್ ಕೊಟ್ಟಿದೆ.
ಮೃತಪಟ್ಟವರ ಕುಟುಂಬಸ್ಥರ ಹೇಳಿಕೆ ಗಾಯಾಳುಗಳ ಹೇಳಿಕೆ, ತನಿಖಾಧಿಕಾರಿಗಳಿಂದ ಘಟನೆ ಬಗ್ಗೆ ವಿವರಣೆ ಪಡೆದು ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ಶಿಫಾರಸ್ಸು ಮಾಡಲಿದೆ.